ಅಕ್ಕಿಆಲೂರ: ಛಲ ಮತ್ತು ಆತ್ಮವಿಶ್ವಾಸವೊಂದೇ ಸ್ಪಷ್ಟಗುರಿ ಮತ್ತು ಮಾರ್ಗದರ್ಶನ ನೀಡುತ್ತದೆ. ಈ ದಿಸೆಯಲ್ಲಿ ಮೌಲ್ಯಾಧ್ಯಾರಿತ ಮತ್ತು ನೈತಿಕ ಶಿಕ್ಷಣ ನೀಡುವಲ್ಲಿ ವಿದ್ಯಾರ್ಥಿ ಮಿತ್ರ ಹೆಚ್ಚು ಸಹಕಾರಿಯಾಗಿದೆ ಎಂದು ನಿವೃತ್ತ ಉದ್ಯೋಗಿ ಪ್ರೇಮಾ ಬಸವರಾಜಗೌಡ ಪಾಟೀಲ ಹೇಳಿದರು.
ಸಮೀಪದ ಸಮ್ಮಸಗಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆ ವಿತರಿಸಿ ಅವರು ಮಾತನಾಡಿದರು.
ಪ್ರತಿ ಮಗುವಿನಲ್ಲೂ ಅಸಾಧಾರಣ ಪ್ರತಿಭೆ, ಆತ್ಮಶಕ್ತಿ ಇರುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿ ಆಧಾರವಾಗಿ ಶಿಕ್ಷಣ ಬೋಧಿಸುವುದು ಕಷ್ಟಸಾಧ್ಯ. ಆದರೆ, ಎಲ್ಲ ಮಗುವಿನ ಅಗತ್ಯತೆ, ಸಾಮಾಜಿಕ ಪರಿಜ್ಞಾನ, ವ್ಯಕ್ತಿತ್ವ ವಿಕಸನ ಹಾಗೂ ಪ್ರಚಲಿತ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ತೆರೆದಿಡುವ ವಿದ್ಯಾರ್ಥಿ ಮಿತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿದೆ. ಹೀಗಾಗಿ, ನಮ್ಮ ಪುತ್ರಿ, ಕೆಎಎಸ್ ಅಧಿಕಾರಿ ಭುವನೇಶ್ವರಿ ಪಾಟೀಲ, ತಾನು ಕಲಿತ ಸಮ್ಮಸಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆ ನೀಡಲು ಮುಂದಾಗಿದ್ದಾಳೆ ಎಂದರು.
ಪತ್ರಕರ್ತ ಕಿರಣ ಹೂಗಾರ, ವಿಜಯವಾಣಿಯ ವಿದ್ಯಾರ್ಥಿ- ಉದ್ಯೋಗ ಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗುವ ಉಪಯುಕ್ತ ಲೇಖನ, ಮಾಹಿತಿ, ಉದ್ದೇಶದ ಕುರಿತು ಮಾತನಾಡಿದರು. ನಂತರ ಶಾಲೆಯ ವತಿಯಿಂದ ಪ್ರೇಮಾ ಪಾಟೀಲ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.