ಹುಬ್ಬಳ್ಳಿ: ಹಣಕಾಸಿನ ವಿಚಾರವಾಗಿ ಆಟೋ ಚಾಲಕನಿಗೆ ಇಬ್ಬರು ಚಾಕುವಿನಿಂದ ಇರಿದ ಘಟನೆ ಬುಧವಾರ ಸಂಜೆ ಹಳೇಹುಬ್ಬಳ್ಳಿಯ ಆನಂದನಗರ ರಸ್ತೆಯ ನಾಗಲಿಂಗನಗರದಲ್ಲಿ ನಡೆದಿದೆ.
ಹಳೇಹುಬ್ಬಳ್ಳಿ ಸಂಗಮ ಕಾಲನಿಯ ತೌಶೀಫ್ ಮುಲ್ಲಾ (32) ಚಾಕು ಇರಿತಕ್ಕೆ ಒಳಗಾಗಿದ್ದು, ಹಳೇಹುಬ್ಬಳ್ಳಿ ಗುಡಿ ಓಣಿಯ ವಿಶಾಲ ಮತ್ತು ನಾಗಲಿಂಗನಗರದ ಪ್ರಮೋದ ಚಾಕುವಿನಿಂದ ಇರಿದಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿದ್ದು, ತೌಶೀಫ್ನನ್ನು ಕಿಮ್ಸ್ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪ್ರಮೋದನಿಂದ ತೌಶೀಫ್ ವಾರದ ಬಡ್ಡಿ ಆಧಾರದಲ್ಲಿ ಸಾಲ ಪಡೆದಿದ್ದ. ಆರ್ಥಿಕ ಸಮಸ್ಯೆಯಿಂದಾಗಿ ತೌಶೀಫ್ 2 ತಿಂಗಳಿಂದ ಬಡ್ಡಿ ಕಟ್ಟಿರಲಿಲ್ಲ. ಹೀಗಾಗಿ ಪ್ರಮೋದ ಬಡ್ಡಿ ಭರಿಸುವಂತೆ ತೌಶೀಫ್ಗೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಬುಧವಾರ ಸಂಜೆ ತೌಶೀಫ್ನ ಮೇಲೆ ಪ್ರಮೋದ ಹಾಗೂ ವಿಶಾಲ ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.