ಬೆಳಗಾವಿ: ಹೊನಗಾದ ಎಂಎಸ್ಪಿಎಲ್ ಹಾಗೂ ಸ್ಥಳೀಯ ಹಲವು ಆಕ್ಸಿಜನ್ ಘಟಕಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ತುರ್ತು ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಗೆ ಹಂಚಿಕೆಯಾಗಿರುವ ಆಕ್ಸಿಜನ್ ಸಮರ್ಪಕ ದಾಸ್ತಾನು ಮತ್ತು ಸಕಾಲಕ್ಕೆ ಸಂಬಂಧಿಸಿದ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಆಕ್ಸಿಜನ್ ದಾಸ್ತಾನು ಲಭ್ಯತೆ, ಪ್ರತಿದಿನದ ಪೂರೈಕೆ ಹಾಗೂ ದಿನದ ಕೊನೆಯಲ್ಲಿ ಇರುವ ಶಿಲ್ಕುಗಳು ಮೇಲೆ ನೋಡಲ್ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದರು.
ಈ ಎರಡೂ ಘಟಕಗಳ ಮುಖ್ಯಸ್ಥರ ಜತೆ ಚರ್ಚೆ ನಡೆಸಿದ ಎಂ.ಜಿ.ಹಿರೇಮಠ, ಘಟಕಗಳ ಸಂಗ್ರಹಣಾ ಸಾಮರ್ಥ್ಯ ಮತ್ತು ಉತ್ಪಾದನೆ ಕುರಿತು ಮಾಹಿತಿ ಪಡೆದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ನಿಸಾರ್ ಅಹ್ಮದ್ ಮತ್ತಿತರರಿದ್ದರು.