ಗೋಕಾಕ: ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಇದರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸೋಂಕಿತರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಸಿಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಎನ್ಎಸ್ಎಫ್ ಅತಿಥಿ ಗೃಹದ ಆವರಣದಲ್ಲಿ ಕೋವಿಡ್ ಸಂಬಂಧ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಟಾಸ್ಕ್ಫೋರ್ಸ್ ಸಭೆಯನ್ನು ಬುಧವಾರ ದೂರವಾಣಿ ಮೂಲಕ ನಡೆಸಿದ ಅವರು, ಕರೊನಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕು. ಸೋಂಕು ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಬಹುತೇಕ ಸೋಂಕಿತರಿಗೆ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಗೋಕಾಕ ಸಾರ್ವಜನಿಕ ಆಸ್ಪತ್ರೆ, ಮಲ್ಲಾಪುರ ಪಿ.ಜಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಿರುವುದಾಗಿ ಮಾಹಿತಿ ನೀಡಿದರು. ಸೋಂಕಿತರಿಗೆ ರಾಮಬಾಣವಾಗಿರುವ ರೆಮ್ಡೆಸಿವರ್ ಕೂಡ ಅಗತ್ಯವಿರುವಷ್ಟು ಲಭ್ಯ ಇವೆ. ಸೋಂಕಿತರಿಗೆ ಸದಾ ಕಾಲವೂ ಆಕ್ಸಿಜನ್ ಕೊರತೆ ಎದುರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಗೋಕಾಕ ತಹಸೀಲ್ದಾರ್ ನವೀನ ಹುಲ್ಲೂರ, ಮೂಡಲಗಿ ತಹಸೀಲ್ದಾರ್ ಡಾ. ಮೋಹನ ಭಸ್ಮೆ, ಗೋಕಾಕ ಡಿವೈಎಸ್ಪಿ ಜಾವೇದ್ ಇನಾಂದಾರ್, ತಾಲೂಕು ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಗೋಕಾಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಆಂಟಿನ್, ಹಿರಿಯ ವೈದ್ಯ ಡಾ. ಆರ್.ಎಸ್. ಬೆಣಚಿನಮರ್ಡಿ, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಸಿಪಿಐಗಳಾದ ಗೋಪಾಲ ರಾಠೋಡ, ಶ್ರೀಶೈಲ ಬ್ಯಾಕೋಡ, ಸತೀಶ ಕಣ್ವೆಶ್ವರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿಡಿಪಿಒ ವೈ. ಎಂ. ಗುಜನಟ್ಟಿ, ಬಿಸಿಎಂ ಅಧಿಕಾರಿ ಆರ್. ಕೆ. ಬಿಸಿರೊಟ್ಟಿ ಇತರರು ಇದ್ದರು.