ಅರಸೀಕೆರೆ: ಸರ್ಕಾರದ ಸವಲತ್ತುಗಳನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ವಕ್ಫ್ ಬೋರ್ಡ್ ಸಮಿತಿಯ ನೂತನ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್ ಹೇಳಿದರು.
ಮುಸ್ಲಿಂ ಜಮಾತ್ ಸಮಿತಿ, ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಜಾಮಿಯಾ ಮಸೀದಿ ಮುಂಭಾಗವಿರುವ ಎಸ್ಎಂಜೆ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುವ ಎಲ್ಲ ಅನುದಾನ ಸದ್ಬಳಕೆ ಮಾಡಿಕೊಂಡು ಸಮುದಾಯದ ನಾಗರಿಕರ ಏಳಿಗೆಗೆ ಶ್ರಮಿಸಲಿದ್ದೇನೆ. ವಕ್ಫ್ ಆಸ್ತಿ ಒತ್ತುವರಿ ಕುರಿತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಲವು ದೂರುಗಳು ಕೇಳಿಬಂದಿವೆ. ಈ ಸಂಬಂಧ ಅಧಿಕಾರಿಗಳು ಹಾಗೂ ಸದಸ್ಯರ ಸಭೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿ ಕ್ರಮ ವಹಿಸಲಾಗುವುದು. ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಮನಗಂಡು ನನಗೆ ಹೊಸ ಜವಾಬ್ದಾರಿ ನೀಡಿದ್ದು, ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಜಮಾತ್ ಸಮಿತಿಯ ಕಾರ್ಯದರ್ಶಿ ರಿಯಾಜ್ ಮಾತನಾಡಿ, ಪ್ರಥಮ ಬಾರಿಗೆ ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಸ್ಥಾನ ತಾಲೂಕಿಗೆ ದೊರೆತಿರುವುದು ಸಂತಸ ನೀಡಿದೆ. ಇದರಿಂದಾಗಿ ನಮ್ಮ ಸಮುದಾಯದ ಜನಸಾಮಾನ್ಯರ ಕೆಲಸ, ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.