ಕಾರವಾರ: ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಅಲಗೇರಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸುವುದಾಗಿ ನೌಕಾಸೇನೆ ತಿಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಭೂ ಸ್ವಾಧೀನ ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದೆ. ಟ್ಯಾಗೋರ್ ಕಡಲ ತೀರವನ್ನು ಪ್ರತಿಷ್ಠಿತ ಬ್ಲ್ಯೂ ಫ್ಲ್ಯಾಗ್ಗೆ ಆಯ್ಕೆ ಮಾಡಲು ಪ್ರಯತ್ನ ನಡೆದಿದೆ. ಅದು ಜಾರಿಯಾದಲ್ಲಿ 10 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪಥ ಗುತ್ತಿಗೆ ಕಂಪನಿ ಐಆರ್ಬಿಯಿಂದ ಹಲವು ಸಮಸ್ಯೆ ಉಂಟಾಗಿದೆ. ಬೆಂಗಳೂರು ವಿಧಾನಸೌಧದಲ್ಲಿ ಪಿಡಬ್ಲ್ಯುಡಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕರಾವಳಿಯ ಮೂರು ಶಾಸಕರ ಸಭೆ ನಡೆಸಿ ಆಗಬೇಕಾದ ಕಾಮಗಾರಿಗಳ ಕುರಿತು ಮಾಹಿತಿ ಪಡೆಯಲಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಕ್ವಾರಿಗಳನ್ನು ಸ್ವತಃ ಹೋಗಿ ಪರಿಶೀಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬ್ಲಾಸ್ಟಿಂಗ್ಗೆ ಜಿಲ್ಲಾಧಿಕಾರಿ ಪರವಾನಗಿ ಪಡೆಯುವಂತೆ ಸೂಚಿಸಿದ್ದೇನೆ ಎಂದರು.
- ಡಿಸಿ ಹೇಳಿದ್ದು:
- ದಾಂಡೇಲಿ ಸೇರಿ ಇತರೆಡೆ ಜಲ ಸಾಹಸ ಕ್ರೀಡೆಗಳಲ್ಲಿ ಸುರಕ್ಷತೆ ಕೈಗೊಳ್ಳದವರ ಹಾಗೂ ಸಂಬಂಧಪಟ್ಟ ಪ್ರವಾಸಿಗರ ಮೇಲೂ ಪ್ರಕರಣ ದಾಖಲು.
- ನೀರಿನಲ್ಲಿ ಅಪಾಯಕ್ಕೆ ಸಿಲುಕಿ ಬಚಾವಾಗಿ ಬಂದವರ ಮೇಲೂ ಪೊಲೀಸ್ ದೂರು ದಾಖಲು.
- ಮಾಲೀಕರು ಸ್ಥಳದಲ್ಲೇ ವಾಸ್ತವ್ಯವಿಲ್ಲದೆ ರೆಸಾರ್ಟ್ ಮಾದರಿಯಲ್ಲಿ ನಡೆಯುವ ಹೋಂ ಸ್ಟೇಗಳ ಮರು ಪರಿಶೀಲನೆ. ಅವುಗಳ ಮೇಲೆ ಕ್ರಮ.