ಕಾಗವಾಡ, ಬೆಳಗಾವಿ: ಅರ್ಹರು ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಮುಖ್ಯ ಉದ್ದೇಶದಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಪ್ರಕಟಣೆ ಮಾಡಲಾಗುತ್ತಿದೆ ಎಂದು ಕಾಗವಾಡ ತಹಸೀಲ್ದಾರ್ ರಾಜೇಶ ಬುರ್ಲಿ ಹೇಳಿದರು. ಇಲ್ಲಿನ ಶಿವಾನಂದ ಮಹಾವಿದ್ಯಾಲಯದಲ್ಲಿ ತಾಲೂಕಾಡಳಿತದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದಂತೆ ನಾಲ್ಕು ಹಂತದಲ್ಲಿ ಮತದಾರರ ಹೆಸರು ಪರಿಷ್ಕರಣೆಯು ನ.12, 20 ಹಾಗೂ ಡಿ.3, 4 ನೇ ತಾರೀಖಿನಂದು ಮಿಂಚಿನ ನೋಂದಣಿ ನಡೆಯಲಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿ.ಎಸ್.ತುಗಶೆಟ್ಟಿ ಹಾಗೂ ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಡಾ. ಎಸ್.ಪಿ. ತಳವಾರ ಮಾತನಾಡಿ, 18 ವರ್ಷ ತುಂಬಿದ ಎಲ್ಲ ಅರ್ಹ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಇತರರಿಗೂ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು. ಬಿಇಒ ಎಂ.ಆರ್.ಮುಂಜೆ, ಸಿಡಿಪಿಓ ಸಂಜೀವ ಕುಮಾರ ಸದಲಗಿ, ತಾಪಂ ಸಹಾಯಕ ನಿರ್ದೇಶಕ ವೈ.ಪಿ. ಬೋಳಶೆಟ್ಟಿ, ಪೊಲೀಸ್ ಅಧಿಕಾರಿ ಹಣಮಂತ ನೆರಳೆ,
ಸಹಾಯಕ ಕೃಷಿ ಅಧಿಕಾರಿ ಕಾಂತಿನಾಥ ಬಿರಾದಾರ, ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಡಾ. ಎಸ್.ಪಿ. ತಳವಾರ ಇತರರು ಇದ್ದರು.