ಎನ್.ಆರ್.ಪುರ: ತಾಲೂಕಿನ ಅಭಿವೃದ್ಧಿ ಕಾರ್ಯಗಳಲ್ಲಿ ಛಾಯಾಗ್ರಾಹಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದರು. ಪಟ್ಟಣದ ಅಗ್ರಹಾರ ಶ್ರೀ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಛಾಯಾ ಉತ್ಸವ-2022ರಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರು ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡುತ್ತಾ ಬಂದಿದ್ದಾರೆ. ಛಾಯಾಗ್ರಾಹಕನ ಚಿತ್ರ ವಸ್ತುಸ್ಥಿತಿಯನ್ನು ಅರ್ಥೈಸುತ್ತದೆ. ಪತ್ರಕರ್ತ ಹಾಗೂ ಛಾಯಾಗ್ರಾಹಕ ಒಬ್ಬ ರಾಜಕಾಣಿಗಿಂತಲೂ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದರು.
ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಛಾಯಾಗ್ರಾಹಕ ವೃತ್ತಿ ನಮ್ಮ ನೆನಪಿನ ಬುತ್ತಿಯನ್ನು ನೀಡುತ್ತದೆ. ಛಾಯಾಚಿತ್ರದ ಸಂವೇದನೆ ಮತ್ತು ಅಭಿವ್ಯಕ್ತಿಯನ್ನು ಹೊಂದಿರುತ್ತವೆ ಎಂದು ಹೇಳಿದರು. ಜಿಲ್ಲಾ ಸಂಘದ ಅಧ್ಯಕ್ಷ ಜಯಚಂದ್ರ ಮಾತನಾಡಿ, ಸರ್ಕಾರ ಛಾಯಾಗ್ರಾಹಕರಿಗೆ ಮಾನ್ಯತೆ ನೀಡಿಲ್ಲ. ಪ್ರಸ್ತುತ ದಿನಗಳಲ್ಲಿ ಛಾಯಾಗ್ರಹಣದ ಪರಿಕರಗಳ ದರ ಗಗನಕ್ಕೇರಿವೆ. ಇದರ ಜತೆಗೆ ಮೊಬೈಲ್ಗಳ ಹಾವಳಿಯಿಂದ ಛಾಯಾಗ್ರಾಹಕ ವೃತ್ತಿಗೆ ಸಂಕಷ್ಟ ತಂದೊಡ್ಡುತ್ತಿವೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಲಿಯಾಸ್ ಮಾತನಾಡಿದರು. ಹಿರಿಯ ಛಾಯಾಗ್ರಾಹಕ ಮಥಾಯಿ ಅವರಿಗೆ ತಾಲೂಕು ಛಾಯಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಾಧಕ ಪುರಸ್ಕಾರಕ್ಕಾಗಿ ಕೆ.ಎನ್.ಗಿರೀಶ್, ಬಿ.ಪಿ.ಬಾಲಚಂದ್ರ, ಎಲ್.ಪಿ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಚಿತ್ರ ಬಿಡಿಸುವ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.