ದಾವಣಗೆರೆ: ನೆಚ್ಚಿನ ನಟರ ಹೆಸರಲ್ಲಿ ಸಂಘ ಸ್ಥಾಪಿಸುವ ಅಭಿಮಾನಿಗಳು, ಆಯಾ ನಟರ ಘನತೆ ಕಾಪಾಡುವ ಜವಾಬ್ದಾರಿ ಮೆರೆಯಬೇಕು. ಸಮಾಜಮುಖಿ ಕೆಲಸ ಮಾಡಬೇಕು ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ್ ಹೇಳಿದರು.
ನಗರದ ರಾಜ್ಯ ಸಾರಿಗೆ ಸಂಸ್ಥೆ ನಿಲ್ದಾಣದ ಹಿಂಬದಿಯ ಡಾ ವಿಷ್ಣುದಾದಾ ವೃತ್ತದಲ್ಲಿ ಇತ್ತೀಚೆಗೆ ಜೈ ಕರುನಾಡ ವೇದಿಕೆಯ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅವರ 13ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಷ್ಣುವರ್ಧನ್ ಅವರು ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆ ಅಪಾರ. ಮೊದಲ ಹೆಸರು ಸಂಪತ್ಕುಮಾರ್. ಅವರ ಅಭಿನಯ, ಸಿನಿಮಾಗಳು ಮತ್ತು ವೈಯಕ್ತಿಕ ಬದುಕು ಕೂಡ ಗಮನಾರ್ಹವಾಗಿತ್ತು ಎಂದರು.
ವಿಷ್ಣುವರ್ಧನ್ ಸೌಹಾರ್ದತೆ ಉತ್ತೇಜಿಸಲು ಮತ್ತು ಪ್ರವಾಹದಂತಹ ವಿಪತ್ತಿನ ಸಂದರ್ಭದಲ್ಲಿ ಸಹಾಯ ಮಾಡಲು ಸ್ನೇಹಲೋಕ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರವಾಹ ಪೀಡಿತ ಸಂತ್ರಸ್ತರ ನೆರವಿನ ನಿಧಿ ಸಂಗ್ರಹಿಸಲು ಅವರು ಪಾದಯಾತ್ರೆ ನಡೆಸಿದರು. ವಿಷ್ಣುವರ್ಧನ್ ಪತ್ನಿ ಭಾರತಿ ಇಬ್ಬರೂ ಮಂಡ್ಯ ಜಿಲ್ಲೆಯ ಮೇಲುಕೋಟೆ ಪಟ್ಟಣವನ್ನು ದತ್ತು ಪಡೆದಿದ್ದರು ಎಂದು ಸ್ಮರಿಸಿದರು.
ಶತಾಯುಷಿ ಗುರುಬಸಮ್ಮ ಅವರನ್ನು ಗೌರವಿಸಲಾಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಪರಶುರಾಂ ನಂದಿಗಾವಿ ಮತ್ತು ಜಿಲ್ಲಾ ಉಪಾಧ್ಯಕ್ಷ ಪಂಚಾಕ್ಷರಿ ಜಿ. ಕಳ್ಳಿಮಠ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಬಾಳೆಕಾಯಿ, ಎಸ್.ಅಣ್ಣಪ್ಪ, ನಾಗರಾಜ್ ಸಂಗಾಪುರ, ರಾಜು, ರುದ್ರೇಶ್, ಸಂತೋಷ, ಪಂಚಾಕ್ಷರಿ, ಮಂಜುನಾಥ ಹೊಸಮನಿ, ನಾಗರಾಜ್, ರವಿಕುಮಾರ್ ದೋಸೆ, ಗಿರೀಶ್ ಇತರರಿದ್ದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪಕ್ಕದ ಉದ್ಯಾನ ಅಭಿವೃದ್ಧಿಪಡಿಸಿ ಡಾ. ವಿಷ್ಣುವರ್ಧನ್ ಎಂದು ನಾಮಕರಣ ಮಾಡುವಂತೆ ಸಂಘಟಕರು ಮಾಜಿ ಮೇಯರ್ ಎಸ್.ಟಿ.ವೀರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.