ನರಗುಂದ: ಅನೇಕ ದಿನಗಳಿಂದ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಆಶ್ರಯ ಪಡೆದಿದ್ದ ಅಪರಿಚಿತ ಬುದ್ಧಿಮಾಂದ್ಯ ಬಾಲಕಿಯನ್ನು ಪಂಚಮಿ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಸೋಮವಾರ ಗದಗ ಬಾಲ ಮಂದಿರಕ್ಕೆ ಒಪ್ಪಿಸಿದರು.
ಪಟ್ಟಣದ ತರಕಾರಿ ಮಾರುಕಟ್ಟೆ, ಗಾಂಧಿ ಸರ್ಕಲ್, ಪುರಸಭೆ ಮತ್ತಿತರ ಪ್ರದೇಶಗಳಲ್ಲಿ ಈಕೆ ತಿರುಗಾಡುತ್ತಿದ್ದಳು. ಈ ಕುರಿತು ಸಾರ್ವಜನಿಕರು ಪಂಚಮಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕೇಂದ್ರದ ಅಧಿಕಾರಿಗಳಾದ ಭಾರತಿ ಹೊಂಗಲ, ಸಕ್ಕುಬಾಯಿ ಮಾಣಿಕ್, ಶಿವಬಸನಗೌಡ ಅಣ್ಣಿಗೇರಿ, ಭಾರತಿ ಸೂರ್ಯವಂಶಿ ಅವರು ಬಾಲಕಿಯ ಗುರುತು ಪತ್ತೆಗಾಗಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದರು.
ಕನ್ನಡ ಮಾತನಾಡುವ ಈ ಬಾಲಕಿ ತನ್ನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈಕೆ ಸಂಪೂರ್ಣ ಬುದ್ಧಿಮಾಂದ್ಯಳಾಗಿದ್ದು, ಗುರುತು ಪತ್ತೆಗೆ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗುವುದು. ಅಲ್ಲಿಯವರೆಗೆ ಗದಗ ಬಾಲ ಮಂದಿರಕ್ಕೆ ಒಪ್ಪಿಸುವಂತೆ ಸಿಪಿಐ ಡಿ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.