ಕುಮಟಾ: ಸರ್ಕಾರದ ಅನುದಾನ ಹೊಡೆಯುವುದಕ್ಕಾಗಿ ಕರೊನಾ ಇಲ್ಲದವರನ್ನೂ ಕರೆದುಕೊಂಡು ಹೋಗಿ ಬಳಿಕ ಕರೆತಂದು ಬಿಡಲಾಗುತ್ತಿದೆ ಎಂದು ಕರೊನಾ ಸೋಂಕಿನ ಬಗ್ಗೆ ಇಲ್ಲದ ಅಪಪ್ರಚಾರ ಹಬ್ಬುತ್ತಿರುವುದು ತೀರಾ ವಿಷಾದದ ಸಂಗತಿ ಎಂದು ಶಾಸಕ ದಿನಕರ ಶೆಟ್ಟಿ ಖೇದ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಕರೊನಾ ಜಾಗೃತಿ ವಾಹನ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೋರ್ವ ಕರೊನಾ ಸೋಂಕಿತನ ಚಿಕಿತ್ಸೆಗೆ 3 ಲಕ್ಷ ರೂ. ಸರ್ಕಾರದಿಂದ ಅಥವಾ ಡಬ್ಲು ್ಯಚ್ಒದಿಂದ ಬರುತ್ತದೆ ಎಂಬುದು ಶುದ್ಧ ಸುಳ್ಳು . ಕರೊನಾ ಸೇನಾನಿಗಳು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಪರಿಣಾಮವಾಗಿ ಸಾಕಷ್ಟು ಕರೊನಾ ಹರಡುವಿಕೆಯನ್ನು ತಡೆಯುವಲ್ಲಿ ಸಫಲವಾಗಿದ್ದೇವೆ. ತಾಲೂಕಿನಲ್ಲಿ ಸ್ವತಃ ಹಲವಾರು ವೈದ್ಯರೂ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದರು.
ಡಾ. ಜಿ.ಜಿ.ಹೆಗಡೆ ಮಾತನಾಡಿ, ಕರೊನಾಕ್ಕೆ ಭಯ ಪಡುವ ಅಗತ್ಯವಿಲ್ಲ. ಇದರಿಂದ ಸಾಯುವುದಿಲ್ಲ. ಸಾಯುವವರ ಪ್ರಮಾಣ ಕೇವಲ ಶೇ. 2 ಮಾತ್ರ, ಆದರೆ ಎಚ್ಚರಿಕೆ ಅಗತ್ಯ, ಪಾಸಿಟಿವ್ ಬಂದವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಾರೆಯೇ ಹೊರತು ಉಳಿದವರು ಗೊಂದಲ ಪಡುವುದು ಬೇಡ ಎಂದರು.
ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಪಂ ಸದಸ್ಯ ಗಜಾನನ ಪೈ, ವಿನೋದ ಪ್ರಭು, ಎಂ.ಜಿ.ಭಟ್, ವಿನಾಯಕ ಭಟ್ ಸಂತೇಗುಳಿ, ಸುಧೀರ ಪಂಡಿತ್, ವಿನಾಯಕ ನಾಯ್ಕ ಮೋಹಿನಿ ಗೌಡ, ಜಯಾ ಶೇಟ್, ಸಂತೋಷ ನಾಯ್ಕ, ತುಳಸು ಗೌಡ, ಸೂರ್ಯಕಾಂತ ಗೌಡ, ಕುಮಾರ ಕವರಿ ಇತರರು ಇದ್ದರು.