ದಾವಣಗೆರೆ: ಅನ್ನ ಹಾಗೂ ಜ್ಞಾನ ದಾಸೋಹಕ್ಕೆ ಶ್ರೀಮಠಗಳು ಹಾಗೂ ಪುಣ್ಯಕ್ಷೇತ್ರಗಳ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಕುಡಿಸುವ ಹಬ್ಬ ಬಸವಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಹಸಿವು ನೀಗಿಸಲು ಹಾಲು ಸಹಾಯಕವಾದರೆ ಜ್ಞಾನದಾಹ ನೀಗಿಸಲು ಶಿಕ್ಷಣ ಬಹಳ ಪ್ರಮುಖವಾಗಿದೆ. ಮಠ ಮತ್ತು ಪುಣ್ಯಕ್ಷೇತ್ರಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಮಕ್ಕಳ ಕಲಿಕೆ ಜತೆಗೆ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.
ಅಮೃತ ಸಮಾನವಾದ ಹಾಲು ಹೆಚ್ಚು ಪೌಷ್ಟಿಕಾಂಶ ಹೊಂದಿದ್ದು, ಮಕ್ಕಳ ಬೆಳವಣಿಗೆಗೆ ಇದು ಬಹಳ ಮುಖ್ಯ. ಮಕ್ಕಳಲ್ಲಿ ಗ್ರಹಿಕೆ ಶಕ್ತಿ ಹಾಗೂ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ಇದರಿಂದ ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಉನ್ನತ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರೆಯಲಾಗುತ್ತದೆ. ಆದರೆ ಇಲ್ಲಿ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ವಿಶಿಷ್ಟ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಶ್ಲಾಘಿಸಿದರು.
ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಪ್ರಸ್ತುತ ದೇವರು, ಧರ್ಮ ಹಾಗೂ ಅಭಿಷೇಕದ ಹೆಸರಿನಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗೂ ಎಳೆನೀರು ಮೊದಲಾದ ಪೌಷ್ಟಿಕ ಆಹಾರ ಪದಾರ್ಥ ವ್ಯರ್ಥ ಮಾಡಲಾಗುತ್ತಿದೆ. ದೇಶದಲ್ಲಿ ಲಕ್ಷಾಂತರ ಜನರಿಗೆ ಪೌಷ್ಟಿಕಾಂಶದ ಹಾಲು ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಚಿತ್ರದುರ್ಗ ಬೃಹನ್ಮಠದ ಉತ್ತರಾಧಿಕಾರಿ ಬಸವಾದಿತ್ಯ ದೇವರು, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಬ್ಯಾಡಗಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಹುಣಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ತಿಳುವಳ್ಳಿಯ ಶ್ರೀ ನಿರಂಜನ ಸ್ವಾಮೀಜಿ, ಶ್ರೀ ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಎಸ್.ಓಂಕಾರಪ್ಪ, ವಿರಕ್ತಮಠ ಧರ್ಮದರ್ಶಿ ಸಮಿತಿ ಉಪಾಧ್ಯಕ್ಷ ಹಾಸಬಾವಿ ಕರಿಬಸಪ್ಪ, ಸದಸ್ಯ ಲಂಬಿ ಮುರುಗೇಶಪ್ಪ ಇತರರು ಇದ್ದರು.
—-