ಕಾರವಾರ: ಭೂ ಕುಸಿತದ ಕಾರಣಕ್ಕೆ ಬಂದಾಗಿದ್ದ ಅಣಶಿ ಘಟ್ಟದಲ್ಲಿ ವಾಹನ ಸಂಚಾರ ಪುನರಾರಂಭಿಸಲು ಅವಕಾಶ ನೀಡಲಾಗಿದೆ.
ಬೆಳಗ್ಗೆ 7 ರಿಂದ ಸಾಯಂಕಾಲ 6 ರವರೆಗೆ ಮಾತ್ರ ಹಲವು ನಿರ್ಬಂಧಗಳ ಜತೆ ಲಘು ವಾಹನಗಳಿಗೆ ಮಾತ್ರ ಓಡಾಡಲು ಅವಕಾಶ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೋಮವಾರ ಆದೇಶ ಹೊರಡಿಸಿದ್ದಾರೆ.
ಕಾರವಾರ-ಜೊಯಿಡಾ ರಾಜ್ಯ ಹೆದ್ದಾರಿಯಲ್ಲಿ ಅಣಶಿ ಘಟ್ಟ ಪ್ರದೇಶದಲ್ಲು ಕೆಲವೆಡೆ ಕುಸಿತ ಉಂಟಾದ ಕಾರಣ ಜು.,12 ರಿಂದ ಎಲ್ಲ ರೀತಿಯ ವಾಹನ ಸಂಚಾರ ತಡೆದು ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಆದರೆ, ಇದರಿಂದ ಜೊಯಿಡಾ, ದಾಂಡೇಲಿ, ಹಳಿಯಾಳ ಭಾಗದ ಜನರಿಗೆ ತೀವ್ರ ಸಂಕಷ್ಟ ಉಂಟಾಗುತ್ತಿರುವ ಕಾರಣ ಖುದ್ದಾಗಿ ತೆರಳಿ ಸ್ಥಳ ಪರಿಶೀಲಿಸಿದ ಡಿಸಿ ಮುಗಿಲನ್ ಅಧೀನ ಅಧಿಕಾರಿಗಳ ಸಭೆ ನಡೆಸಿ ಈ ನಿರ್ಣಯಕ್ಕೆ ಬಂದಿದ್ದಾರೆ.
ಘಟ್ಟದಲ್ಲಿ ರಸ್ತೆ ಸುರಕ್ಷಿತವಾಗಿರುವುದನ್ನು ಗಮನಿಸಲು ಗಸ್ತು ತಂಡ ರಚಿಸಬೇಕು. ಘಟ್ಟದ ಎರಡೂ ಕಡೆ ತನಿಖಾ ಠಾಣೆ ತೆರೆಯಬೇಕು ಎಂದು ಡಿಸಿ ಆದೇಶದಲ್ಲಿ ಸೂಚಿಸಿದ್ದಾರೆ.