ಬೆಳಗಾವಿ: ಭತ್ತದ ಬೆಳೆಯಲ್ಲಿ ಅಜೋಲಾ ಬೆರಿಸಿ ಮಣ್ಣಿನಲ್ಲಿ ಮಿಶ್ರ ಮಾಡುವುದರಿಂದ ಬೆಳೆಗೆ ಬೇಕಾದ ಸಾರಜನಕದ ಪೂರೈಕೆಯಾಗುವುದಲ್ಲದೆ ಕಳೆಯ ನಿಯಂತ್ರಣವಾಗಿ ಹೆಚ್ಚಿನ ಇಳುವರಿ ಬರುತ್ತದೆ ಎಂದು ಬೆಳಗಾವಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಎಚ್.ಡಿ. ಕೋಳೆಕರ ಹೇಳಿದ್ದಾರೆ.
ತಾಲೂಕಿನ ಬೆನ್ನಾಳಿ ಹಾಗೂ ಹೊನಗಾ ಗ್ರಾಮಗಳ ನಾಟಿ ಭತ್ತದ ಬೆಳೆಯ ಕ್ಷೇತ್ರದಲ್ಲಿ ಅಜೋಲಾ ಕಲ್ಚರನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಜೋಲಾ ಜೈವಿಕ ಪರಿಕರವಾಗಿದ್ದು, ಇದನ್ನು ಭತ್ತ ನಾಟಿಯಾದ ಒಂದು ವಾರದಲ್ಲಿ ಹೊಲದಲ್ಲಿ ಬಿಟ್ಟು 20 ದಿನಗಳ ನಂತರ ಹೊಲದ ತುಂಬೆಲ್ಲ ಪಸರಿಸಿದ ಅಜೋಲಾವನ್ನು ಕಾಲಿನಿಂದ ತುಳಿದು ಮಣ್ಣಿನಲ್ಲಿ ಮಿಶ್ರಣ ಮಾಡುವುದರಿಂದ ಕ್ಷೇತ್ರದ ತುಂಬೆಲ್ಲ ಕಳೆಗಳ ಸಮಸ್ಯೆ ಇರುವುದಿಲ್ಲ. ಇದನ್ನು ಜಾನುವಾರುಗಳಿಗೂ ಕೂಡ ಧಾನ್ಯ ಮಿಶ್ರಣದಲ್ಲಿ ನಿಯಮಿತವಾಗಿ ಕೊಡುವುದರಿಂದ ಹಾಲಿನ ಇಳುವರಿ ಹಾಗೂ ಕೊಬ್ಬಿನ ಪ್ರಮಾಣದಲ್ಲೂ ಏರಿಕೆಯಾಗುವುದು.
ಸಾವಯವ ಭತ್ತ ಉತ್ಪಾದನೆಗೆ ಇದು ಅತ್ಯಂತ ಸೂಕ್ತ ತಾಂತ್ರಿಕತೆಯಾಗಿದ್ದು, ರೈತರು ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ನಾಯ್ಕರ, ಕೃಷಿ ಅಧಿಕಾರಿ ಅರುಣ ಕಾಪ್ಸೆ, ಆತ್ಮಯೋಜನೆ ಉಪ ನಿರ್ದೇಶಕ ಎಂ.ಸಿ.ಮಠದ, ತಾಂತ್ರಿಕ ವ್ಯವಸ್ಥಾಪಕ ರಾಜಶೇಖರ ಭಟ್ ರೈತರಿದ್ದರು.