More

    ಅಗತ್ಯ ವಸ್ತುಗಳ ಕಾರ್ಖಾನೆ ಆರಂಭಕ್ಕೆ ಅನುಮತಿ

    ಹಾವೇರಿ: ಲಾಕ್​ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿರುವ ಅಗತ್ಯ ವಸ್ತುಗಳ ಕಾರ್ಖಾನೆಗಳನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸುವ ಷರತ್ತಿನೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪರವಾನಗಿ ನೀಡಲಿದೆ. ಕಾರ್ಖಾನೆಗಳನ್ನು ಆರಂಭಿಸುವಂತೆ ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಜಿಪಂ ಸಿಇಒ ರಮೇಶ ದೇಸಾಯಿ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆ ನಡೆಸಿ ಮಾತನಾಡಿದ ಅವರು, ರೈತರ ಸಾಮಗ್ರಿಗಳು ಮಾರುಕಟ್ಟೆಗೆ ಹೋಗಬೇಕು. ಗ್ರಾಹಕರಿಗೆ ಅಗತ್ಯ ವಸ್ತುಗಳ ಕೊರತೆಯಾಗಬಾರದು. ಈ ಹಿನ್ನೆಲೆಯಲ್ಲಿ ಕೃಷಿಗೆ ಪೂರಕವಾದ ಕೈಗಾರಿಕೆಗಳು, ದಿನಸಿ ಪೂರಕ ಆಹಾರ ಸಂಸ್ಕರಣ ಘಟಕಗಳು, ಬೇಕರಿ ಸೇರಿ ನಿತ್ಯ ಬಳಕೆಯ ಉತ್ಪಾದನಾ ಘಟಕಗಳನ್ನು ಸುರಕ್ಷತಾ ಮಾನದಂಡವನ್ನು ಅನುಸರಿಸಿ ಆರಂಭಿಸಲು ಅನುಮತಿ ನೀಡಲಾಗುವುದು ಎಂದರು.

    ಕೃಷಿ ಚಟುವಟಿಕೆಗೆ ಅನುಕೂಲಕರವಾಗುವ ಟ್ರ್ಯಾಕ್ಟರ್, ಕೃಷಿ ಉಪಕರಣಗಳ ರಿಪೇರಿಗೆ ಯಾವುದೇ ನಿರ್ಬಂಧವಿಲ್ಲ. ಸರಕು ಸಾಗಾಣಿಕೆ ವಾಹನಗಳ ಗ್ಯಾರೇಜ್​ಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗುವುದು. ಕಾರ್ಖಾನೆ ಮಾಲೀಕರು ತಮ್ಮ ಕಾರ್ವಿುಕರಿಗೆ ಬೇಕಾದ ಪಾಸ್​ಗಳನ್ನು ಪಡೆಯಬೇಕು ಎಂದರು.

    ಕೃಷಿ ಸೇವಾ ವಲಯ, ಕೃಷಿ ಬೀಜೋತ್ಪಾದನೆ, ರೇಷ್ಮೆ ಮಾರಾಟ, ಹೈನುಗಾರಿಕೆ, ಜಿನ್ನಿಂಗ್, ರಸಗೊಬ್ಬರ, ಆಹಾರ ಸಾಮಗ್ರಿಗಳ ಸಂಸ್ಕರಣೆ, ಗಿರಣಿ, ಎಣ್ಣೆ ಮತ್ತು ಪ್ಯಾಕಿಂಗ್ ಇಂಡಸ್ಟ್ರೀಸ್, ಬೇಕರಿ, ಪೌಟ್ರಿ, ಕ್ಯಾಟಲ್ ಫೀಡ್, ವೈದ್ಯಕೀಯ ಸುರಕ್ಷಾ ಸಾಮಗ್ರಿಗಳಾದ ಮಾಸ್ಕ್, ಸ್ಯಾನಿಟೈಸರ್ ತಯಾರಿಕೆ ಸೇರಿ ಅಗತ್ಯ ವಸ್ತುಗಳ ಉತ್ಪಾದನೆಯನ್ನು ಆರಂಭಿಸಲು ಯಾವುದೇ ಅಭ್ಯಂತರವಿಲ್ಲ ಎಂದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ಕಾರ್ಖಾನೆಗಳ ಆರಂಭಕ್ಕೆ ಸರ್ಕಾರದ ಅಧಿಸೂಚನೆಯಂತೆ ವಿನಾಯಿತಿ ಪಡೆದಿರಬೇಕು. ಕಾರ್ಖಾನೆಯ ಪ್ರವೇಶದಿಂದ ಹಿಡಿದು ಹೊರಗೆ ಬರುವವರೆಗೂ ಅವರಿಗೆ ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಹಾಗೂ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಪ್ರತಿ ಕಾರ್ವಿುಕರಿಗೂ ಉತ್ತಮ ಗುಣಮಟ್ಟ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್​ಗ್ಲೌಸ್ ಒದಗಿಸಬೇಕು. ಪ್ರತಿ ಕಾರ್ಖಾನೆಯ ಒಳಗೆ ಹಾಗೂ ಕೆಲಸ ಮಾಡುವ ಜಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರತಿನಿತ್ಯ ಕಾರ್ವಿುಕರಿಗೆ ಕರೊನಾ ಜಾಗೃತಿ ಮುನ್ನೆಚ್ಚರಿಕೆ ಅರಿವು ಮೂಡಿಸಬೇಕು. ಕಾರ್ವಿುಕರಿಗೆ ಕೆಲಸ ಮಾಡುವ ಸ್ಥಳಕ್ಕೆ ಮನೆಯಿಂದ ಹೋಗಲು ಪಾಸ್ ನೀಡಲಾಗುವುದು. ಪಾಸ್ ವ್ಯವಸ್ಥೆಗಾಗಿ ಜಿಲ್ಲಾಡಳಿತ ಭವನದಲ್ಲಿ ಸ್ಪಂದನ ಕೇಂದ್ರವನ್ನು ತೆರೆಯಲಾಗಿದೆ ಎಂದರು.

    ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ದಿಲೀಪ ಶಶಿ, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿನಾಯಕ ಜೋಶಿ, ವಿವಿಧ ಇಲಾಖೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts