ಜೊಯಿಡಾ: ತಾಲೂಕಿನ ನಾಗೊಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೇಲಿ, ಅಂಬರ್ಡಾ, ಪೋಟೋಲಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟ ಮತ್ತು ಓಸಿ (ಜುಗಾರಿ) ಆಟದ ದಂಧೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಭಾಗ್ಯಲಕ್ಷ್ಮಿ ಮಹಿಳಾ ಸಂಘ ಮತ್ತು ಮಹಿಳೆಯರಿಂದ ಜೊಯಿಡಾ ಉಪ ಉಪತಹಸೀಲ್ದಾರ್ ಸಂಜೀವ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಅಕ್ರಮ ಸಾರಾಯಿ ಮಾರಾಟ ಮತ್ತು ಓಸಿ (ಜುಗಾರಿ) ಆಟದಿಂದ ಹಲವಾರು ಕುಟುಂಬ ಬೀದಿಗೆ ಬೀಳುವ ಸ್ಥಿತಿ ನಿರ್ವಣವಾಗುತ್ತಿದೆ. ಕುಡಿದು ಬಂದು ಹೊಡೆದಾಟ, ಕುಟುಂಬ ಕಲಹಗಳಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಇದುವರೆಗೆ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಹಿಳಾ ಸಂಘದ ಗೌರಿ ಭಾಗವತ, ವಾಣಿ ಪೈ, ಸುಶಾಂತಿ ಮಾಪ್ಸೆಕರ, ನಯನಾ ಆಯ್ಕರ, ವಿಮಲಾಕ್ಷಿ ಭಟ್ಟ, ಠಕ್ಕಿ ಪಾವಣೆ, ರಾಜಶ್ರೀ ನಾಯ್ಕ ಇತರರು ಇದ್ದರು.