ಅಕ್ಕಿಆಲೂರ: ಕಳೆದ ಎರಡು ತಿಂಗಳಿಂದ ಅಂಗನವಾಡಿ ತೆರೆದಿಲ್ಲ. ಮಕ್ಕಳಿಗೆ, ಗರ್ಭಿಣಿಯರಿಗೆ ಆಹಾರ ಸಾಮಗ್ರಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಸಮೀಪದ ಗುರುರಾಯಪಟ್ಟಣದ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಗುರುರಾಯಪಟ್ಟಣದ 1ನೇ ನಂಬರ್ ಅಂಗನವಾಡಿಯಲ್ಲಿದ್ದ ಆಹಾರ ಪದಾರ್ಥಗಳು ಹಾಳಾಗಿದ್ದವು. ಅವುಗಳನ್ನು ಎಸೆಯಲು ಇಟ್ಟಿದ್ದನ್ನು ಗಮನಿಸಿದ ಗ್ರಾಮಸ್ಥರು, ಹಾಳಾದ ಪದಾರ್ಥಗಳನ್ನು ಹೊರಗೆ ಚೆಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಕೇಂದ್ರವನ್ನು 2 ತಿಂಗಳಿಂದ ಸರಿಯಾಗಿ ತೆರೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ವಾರಕ್ಕೆ ಎರಡು ಬಾರಿ ಮಾತ್ರ ಅಂಗನವಾಡಿ ಬಾಗಿಲು ತೆರೆಯುತ್ತಾರೆ. ಉಳಿದ ದಿನ ಸಭೆ ಇದೆ ಎಂದು ಸುಳ್ಳು ಹೇಳಿ ತೆರಳುತ್ತಿದ್ದಾರೆ. 40ಕ್ಕೂ ಹೆಚ್ಚು ಮಕ್ಕಳು ಅಂಗನವಾಡಿಗೆ ಬರುತ್ತಿದ್ದರು. ಆ ಮಕ್ಕಳಿಗೆ ಪೂರೈಸಲು ಬಂದಿದ್ದ ಆಹಾರ ಧಾನ್ಯ, ಹಾಲಿನ ಪೌಡರ್ ಮತ್ತು ಬೆಲ್ಲದಲ್ಲಿ ಹುಳುಗಳಾವೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಸುದ್ದಿ ತಿಳಿದು ಸಿಡಿಪಿಒ ಸಂತೋಷ ಎಚ್. ಮತ್ತು ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ತಾಪಂ ಸದಸ್ಯ ರಾಮಣ್ಣ ವಡ್ಡರ, ಬಾಬಣ್ಣ ಲಮಾಣಿ, ಚಂದ್ರು ಲಮಾಣಿ, ಚನ್ನಪ್ಪ ಲಮಾಣಿ ಅರ್ಜುನ ಲಮಾಣಿ, ಅಜೀತ ಚವ್ಹಾಣ, ಅಶೋಕ ಚವ್ಹಾಣ, ದಿನೇಶ ಲಮಾಣಿ, ಸುನೀಲ ಲಮಾಣಿ, ರಾಜೇಶ ಲಮಾಣಿ, ಜಯಪ್ಪ ಲಮಾಣಿ, ಶಂಕರ ಲಮಾಣಿ, ರಾಜೀವ್ ಲಮಾಣಿ, ಗೇಮಣ್ಣ ಲಮಾಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.