ವಿಜಯಪುರ: ಸಿಟ್ಯಾಕೆ..ನನ್ನಾಕಿ..ನಾ ಏನ್ ಮಾಡೇನಿ..ಮನಸ್ಸಿನ ಮಾತ ನೀ ಹೇಳ…ಎಂಬ ಜಾನಪದ ಗೀತೆ ಮೂಲಕ ಚಿತ್ರಕಲಾ ಶಿಕ್ಷಕ ಆನಂದ ಝಂಡೆ ಕುಂಚದಿಂದ ಗೆಳತಿಯ ಚಿತ್ರಕ್ಕೆ ಜೀವ ತುಂಬಿ ನೆರೆದಿದ್ದವರ ಮನ ಗೆದ್ದರು.
ಮಂಗಳವಾರ ನಗರದ ಸಂಗನಬಸವ ಸಮುದಾಯ ಕೇಂದ್ರದಲ್ಲಿ ನಡೆದ ವಿಜಯವಾಣಿ ಎಕ್ಸಪೋದ ಎರಡನೇ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಚಿತ್ರಕಲಾ ಗೌರವಕ್ಕೆ ಪಾತ್ರರಾಗಿರುವ ಬಬಲೇಶ್ವರ ತಾಲೂಕಿನ ಟಕ್ಕಳಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಝಂಡೆ ಒಂದು ಕೈಯಲ್ಲಿ ಮೈಕು, ಇನ್ನೊಂದು ಕೈಯಲ್ಲಿ ಕುಂಚ ಹಿಡಿದು, ಜನಪದ ಸ್ವರದೊಂದಿಗೆ ಗೆಳೆಯನ ಪ್ರಶ್ನೆಗೆ ಕುಂಚದ ಗೆರೆಗಳ ಮೂಲಕ ಅವಳತ್ತ ಚಿತ್ತ ಹರಿಸಿ, ಜತೆಗೆ ಬಿಂದಿಗೆಯೊಂದಿಗೆ ಅವಳ ಏಕಾಂತದ ಚಿತ್ರ ಬಿಡಿಸಿದರು. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿ, ಗಾಯನವನ್ನು ಪ್ರವೃತ್ತಿಯಾಗಿ ಪ್ರೀತಿಸಿ, ಹಾಡುತ್ತಲೇ ಚಿತ್ರ ಬಿಡಿಸಿದ ಶಿಕ್ಷಕ ಝಂಡೆ ಸೈ ಎನಿಸಿಕೊಂಡರು.