ಬೆಂಗಳೂರು: ಈ ಬಾರಿಯ ಯುಗಾದಿ ಹಬ್ಬವನ್ನು ವಿಶೇಷವಾಗಿಸಲು ‘ಕೃಷ್ಣಾವತಾರ’ ಚಿತ್ರತಂಡ ಹೊಸ ಉಡುಗೊರೆಯನ್ನು ನೀಡಿದೆ. ಹೊಸ ಹಾಡನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡ ಹೊಸ ವರ್ಷವನ್ನು ಸ್ವಾಗತಿಸಿದೆ. ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿರಿ. ವೈ.ಎಸ್.ಆರ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಕೃಷ್ಣಾವತಾರ’.
ಇತ್ತೀಚೆಗಷ್ಟೆ ಚಿತ್ರದ ಮೊದಲ ನೋಟವನ್ನು ಅನಾವರಣ ಮಾಡಲಾಗಿತ್ತು. ಈಗ ಯುಗಾದಿ ಹಬ್ಬದ ಸಂದರ್ಭದಲ್ಲಿ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಮೈಸೂರಿನ ಯದುವೀರ್ ಒಡೆಯರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಯುಗಗಳ ಆದಿ ಯುಗಾದಿ, ಹರುಷವು ತಂತು ಯುಗಾದಿ..’ ಎಂದು ಸಾಗುವ ಗೀತೆಯಲ್ಲಿ ಯುಗಾದಿ ಹಬ್ಬದ ಮಹತ್ವ ಹಾಗೂ ವಿಶೇಷತೆಯನ್ನು ಬಣ್ಣಿಸಲಾಗಿದೆ. ಈ ಗೀತೆಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಎಬಿಎಂ ಸಂಗೀತ ಸಂಯೋಜನೆಯಲ್ಲಿ ಅನುರಾಧ ಭಟ್ ಹಾಡಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಶುಭ ರಕ್ಷಾ, ತ್ರಿವೇಣಿ ರಾಜ್ ಅಭಿನಯಿಸಿದ್ದಾರೆ. ನಾಗೇಂದ್ರ ಪ್ರಸಾದ್, ಶುಭ, ತ್ರಿವೇಣಿ ಜತೆ ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಇನ್ನು ಚಿತ್ರಕ್ಕೆ ರಾಜ ಶಿವಶಂಕರ್ ಛಾಯಾಗ್ರಹಣ, ಎಬಿಎಂ ಸಂಗೀತ ಸಂಯೋಜನೆ ಇದೆ.