ಬಿಸಲ್ಪುರ (ಉತ್ತರ ಪ್ರದೇಶ): ತನ್ನ ಅಣ್ಣನ ಹೆಂಡತಿಯ ಮೇಲೆ ಸಲುಗೆಯಿಂದ ಮಾತನಾಡುತ್ತಿದ್ದ 20 ವರ್ಷದ ಯುವಕನೊಬ್ಬ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಸಲ್ಪುರದಲ್ಲಿ ನಡೆದಿದೆ.
ಈತನನ್ನು ಕೊಲೆ ಮಾಡಿರುವುದು ಖುದ್ದು ಅಣ್ಣ ಹಾಗೂ ಅದೇ ಅತ್ತಿಗೆಯೇ ಎಂಬ ಆರೋಪವಿದೆ. ಈ ಕುರಿತು ಅವನ ತಂದೆಯೇ ದೂರು ದಾಖಲಿಸಿದ್ದು, ಮಗ ಮತ್ತು ಸೊಸೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಪಿಲಿಬಿತ್ ಜಿಲ್ಲೆಯ ಬಿಸಲ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಅಣ್ಣ-ಅತ್ತಿಗೆ ಸೇರಿ ಆತನ ದೇಹವನ್ನು ಪಕ್ಕದ ಬೀದಿಗೆ ಎಸೆದು ಬಂದಿದ್ದಾರೆ.
ಇದನ್ನೂ ಓದಿ: ಟಿ.ವಿ. ರಿಮೋಟ್ಗಾಗಿ ಏಳು ವರ್ಷದ ಬಾಲೆಯ ಬರ್ಬರ ಹತ್ಯೆ!
ಸ್ಥಳೀಯರು ಮೃತದೇಹವನ್ನು ನೋಡಿ ಕುಟುಂಬದವರಿಗೆ ಮಾಹಿತಿ ನೀಡಿದಾಗ ಮೊದಲಿಗೆ ಅಪ್ಪನಿಗೆ ತಮ್ಮ ಹಿರಿಯ ಮಗ ಮತ್ತು ಸೊಸೆ ಮೇಲೆ ಅನುಮಾನ ಶುರುವಾಗಿದ್ದು, ಅವರ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ಕೊಲೆಯಾದ ಯುವಕ 20 ವರ್ಷದವನಾಗಿದ್ದು, ಆತನ ಅಣ್ಣನಿಗೆ 30 ವರ್ಷ. ಸದಾ ತನ್ನ ಪತ್ನಿಯ ಜತೆ ತಮ್ಮ ಸಲುಗೆಯಿಂದ ಮಾತನಾಡುತ್ತಿರುವುದು ಅಣ್ಣನಿಗೆ ಸಹಿಸದಾಗಿತ್ತು. ಆದ್ದರಿಂದ ಆತ ಕೊಲೆ ಮಾಡಲು ಮುಂದಾಗಿದ್ದು, ಆತನ ಹೆಂಡತಿಯೂ ಇದಕ್ಕೆ ಸಹಕಾರ ಕೊಟ್ಟಿದ್ದಾಳೆ ಎನ್ನಲಾಗಿದೆ.
ಕೊಲೆಯಾದ ಯುವಕ ವೇದ್ ಪ್ರಕಾಶ್. ಆರೋಪಿ ಓಂ ಪ್ರಕಾಶ್ ಹಾಗೂ ಆತನ ಪತ್ನಿ ಗ್ಯಾನ್ ದೇವಿ ಈಗ ವಿಚಾರಣೆ ನಡೆಯುತ್ತಿದೆ. ಮೃತನ ತಂದೆಯ ದೂರು ಸ್ವೀಕರಿಸಿದ ಪೊಲೀಸರು ಓಂ ಪ್ರಕಾಶ್ ಮತ್ತು ಆತನ ಹೆಂಡತಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 302 ಮತ್ತು 34ರ ಅಡಿ ಪ್ರಕರಣ ದಾಖಲಿಸಿದ್ದಾರೆ.