ಗುರುಪುರ: ಎಡಪದವಿನ ಪಟ್ಲಚ್ಚಿಲ್ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್ನಲ್ಲಿ ಎಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ ಯಾನೆ ಕಿಟ್ಟ(24) ಬುಧವಾರ ಕಣಜದ ಹುಳುಗಳ(ಪಿಲಿಕುಂಡೋಲು) ದಾಳಿಯಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಮನೆಯ ತೆಂಗಿನ ಕಾಯಿ ಕೀಳಲು ತಾನು ಹೊಸದಾಗಿ ಖರೀದಿಸಿದ್ದ ಯಂತ್ರ ಬಳಸಿಕೊಂಡು ಭಾನುವಾರ ನೆರೆಮನೆಯವರ ತೆಂಗಿನ ಮರದಿಂದ ತೆಂಗಿನಕಾಯಿ ಕೀಳಲು ಮರವೇರಿದ ಸಂದರ್ಭ ಮರದಲ್ಲಿದ್ದ ಕಣದ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿದ್ದು, ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿವೆ. ಅವರ ಮೈಮೇಲೆ 70ಕ್ಕೂ ಹೆಚ್ಚು ಕಡೆ ಗಾಯಗಳಾಗಿವೆ. ತಕ್ಷಣ ಮೂಡುಬಿದಿರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಕೇಶವ ಕೊನೆಯುಸಿರೆಳೆದರು. ಅವಿವಾಹಿತರಾಗಿದ್ದ ಅವರು ಮೂವರು ಸಹೋದರರನ್ನು ಅಗಲಿದ್ದಾರೆ.