ಬೈಲಹೊಂಗಲ: ಯುವ ಪೀಳಿಗೆ ಸಂಸ್ಕಾರ, ಅಧ್ಯಾತ್ಮ ಚಿಂತನೆ ಬೆಳೆಸಿಕೊಳ್ಳುವುದು ಅವಶ್ಯ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಗುರು ಮಡಿವಾಳೇಶ್ವರ 33ನೇ ಜಾತ್ರಾ ಮಹೋತ್ಸವ, ಶಿವಶರಣೆ ತಂಗೆಮ್ಮ ತಾಯಿಯ 78ನೇ ಜಯಂತ್ಯುತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜೀವನ ಚರಿತ್ರೆ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಯುಸಿಗೆ ಕಾಲಿಡುತ್ತಿದ್ದಂತೆ ಮಕ್ಕಳು ದುಶ್ಚಟ, ಮೋಜು, ಮಸ್ತಿ, ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಆ ಸಮಯದಲ್ಲಿ ಸತ್ಸಂಗ, ಪೂಜ್ಯರ ವಾಣಿ, ಆದರ್ಶ ವ್ಯಕ್ತಿಗಳ ಬಗ್ಗೆ ಓದಿಕೊಂಡರೆ ಬದುಕು ಹಸನಾಗಲಿದೆ ಎಂದರು. ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಮನುಷ್ಯ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಪೂಜ್ಯರ ವಾಣಿ ಪಾಲಿಸಬೇಕು. ಗುರು ಮಡಿವಾಳೇಶ್ವರರನ್ನು ಸ್ಮರಿಸಿ ಅವರ ಕೃಪೆಗೆ ಪಾತ್ರರಾಗಬೇಕು ಎಂದರು.ಹೊಸೂರ ಗಂಗಾಧರ ಸ್ವಾಮೀಜಿ ಮಾತನಾಡಿ, ಗುರು ಮಡಿವಾಳೇಶ್ವರರ ಚರಿತ್ರೆಯನ್ನೂ ನಾಡಿಗೆ ಮುಟ್ಟಿಸಿದ ಶಿವಶರಣೆ ತಂಗೆಮ್ಮ ತಾಯಿ ಸೇವೆ ಅಪಾರ ಎಂದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಗುರು ಮಡಿವಾಳೇಶ್ವರರು ಸಮಾಜ ಸುಧಾರಣೆಗೆ ಸರ್ವಸ್ವ ಅರ್ಪಿಸಿದ್ದಾರೆ. ಗುರುವಿನ ಸೇವೆ ಮಾಡಿ ಸಂಸ್ಕಾರವಂತರಾಗಬೇಕು ಎಂದರು. ಶ್ರೀಮಠದ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಗುರುವಿನ ಉಪದೇಶ ಪಾಲಿಸುವುದರಿಂದ ಬದುಕು ಪಾವನವಾಗಲಿದೆ. ಮಡಿವಾಳೇಶ್ವರನ ಮಹಿಮೆ ಅಪಾರವಾಗಿದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಮಾತನಾಡಿದರು.
ಮಠಕ್ಕೆ ಸೇವೆ ಸಲ್ಲಿಸಿದ ಭಕ್ತರನ್ನು ಸತ್ಕರಿಸಲಾಯಿತು. ಮಹಾಂತೇಶ ಹಣಸಿ, ಕೊರವಿನಕೊಪ್ಪ ಸ್ವಾಮೀಜಿ, ಉಳವಿ ಶಿವಯೋಗೀಶ್ವರ ಸ್ವಾಮೀಜಿ, ಮರಡಿ ಬಸವೇಶ್ವರ ಜಾತ್ರಾ ಕಮಿಟಿ ಮುಖಂಡ ಜಗದೀಶ ಕೊತಂಬ್ರಿ, ಅನ್ವಿತಾ ಕಲಾದಗಿ, ವೈಷ್ಣವಿ ಕಮ್ಮಾರ, ಮಲ್ಲಿಕಾರ್ಜುನ ಚಿಕ್ಕಮಠ, ರುದ್ರಪ್ಪ ಹೂಗಾರ ಇತರರಿದ್ದರು.