ರಾಮನಗರ: ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿವಾದದ ಬೆನ್ನಲ್ಲೇ ಕನಕಪುರ ತಹಸೀಲ್ದಾರ್ರನ್ನು ರಾತ್ರೋರಾತ್ರಿ ದಿಢೀರ್ ವರ್ಗಾವಣೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕನಕಪುರ ತಹಸೀಲ್ದಾರ್ ಆಗಿದ್ದ ಆನಂದಯ್ಯ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ಆ ಜಾಗಕ್ಕೆ ಯಳಂದೂರು ತಹಸೀಲ್ದಾರ್ ವರ್ಷ ಅವರನ್ನು ನೇಮಿಸಿ, ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಆನಂದಯ್ಯ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೆಚ್ಚಿನ ಅಧಿಕಾರಿಯಾಗಿದ್ದರು ಎನ್ನಲಾಗಿದೆ. ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕಳೆದ ಎರಡು ದಿನಗಳ ಹಿಂದಷ್ಟೇ ಎಸಿಯೊಂದಿಗೆ ಆನಂದಯ್ಯ ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ತಹಸೀಲ್ದಾರ್ ಅವರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರ ವ್ಯಾಪ್ತಿಯ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಮೂರ್ತಿಯು ನಿರ್ಮಾಣವಾಗುತ್ತಿದ್ದು, ಇದಕ್ಕೆ ಬೇಕಾದ 10 ಎಕರೆ ಪ್ರದೇಶ ಹಾಗೂ ಮೂರ್ತಿ ನಿರ್ಮಾಣದ ವೆಚ್ಚವನ್ನು ಡಿಕೆಶಿ ಮತ್ತು ಸಂಸದ ಡಿ. ಕೆ. ಸುರೇಶ್ ಭರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಬೆಳಕಿಗೆ ಬರುತ್ತಲೇ ತೀವ್ರ ಚರ್ಚೆಗೆ ಗುರಿಯಾಗಿ, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಕಷ್ಟು ಮಂದಿ ಪ್ರತಿಮೆ ನಿರ್ಮಾಣವನ್ನು ಖಂಡಿಸಿದ್ದರು. (ದಿಗ್ವಿಜಯ ನ್ಯೂಸ್)