ಯಲಬುರ್ಗಾ: ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇ.7.5 ಮೀಸಲು ಹೆಚ್ಚಿಸಲು ಒತ್ತಾಯಿಸಿ ತಾಲೂಕು ಮಹರ್ಷಿ ವಾಲ್ಮೀಕಿ ಘಟಕ ಪಟ್ಟಣದ ತಹಸಿಲ್ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶ್ರೀಶೈಲ ತಳವಾರಗೆ ಮನವಿ ಸಲ್ಲಿಸಿತು.
ಸಮುದಾಯದ ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ್ ಮಾತನಾಡಿ, ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ಜನಸಂಖ್ಯೆ ಎಸ್ಟಿ ಸಮುದಾಯ ಇದ್ದು, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಸಮುದಾಯ ಮುಖ್ಯವಾಹಿನಿಗೆ ಬರಲು ಮೀಸಲು ಹೆಚ್ಚಳದ ಅಗತ್ಯವಿದೆ. ರಾಜ್ಯದಲ್ಲಿ 17 ಶಾಸಕರು, ಇಬ್ಬರು ಸಂಸದರು ಇದ್ದರೂ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಹಲವು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದದ್ದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಶೇ.7.5 ಮೀಸಲು ಹೆಚ್ಚಿಸಿ ಶೈಕ್ಷಣಿಕ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಒದಗಿಸಬೇಕು. ಸೆ.21ರಂದು ಜರುಗುವ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಶ್ರೀಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮುದಾಯದ ಪ್ರಮುಖರಾದ ಹಂಚ್ಯಾಳಪ್ಪ ತಳವಾರ್, ಹನುಮಗೌಡ ಪಾಟೀಲ್, ಗುಂಡನಗೌಡ ಮಾಲಿಪಾಟೀಲ್, ಶರಣಪ್ಪ ತಳವಾರ್, ಕಳಕಪ್ಪ ತಳವಾರ್, ಭೀಮಣ್ಣ ಹವಳಿ, ದೇವೇಂದ್ರಗೌಡ ತಿಪ್ಪನಾಳ, ಹನುಮಂತಪ್ಪ ಪೂಜಾರ, ಯಮನೂರಪ್ಪ ಯಡ್ಡೋಣಿ, ಹನುಮೇಶ ನಾಯಕ್, ಬಸವರಾಜ ನಾಯಕ್, ಶ್ರೀಕಾಂತಗೌಡ ಮಾಲಿಪಾಟೀಲ್ ಇತರರಿದ್ದರು.