ಯಲಬುರ್ಗಾ: ಕುರಿ ಮೇಕೆಗಳು ಮರಣ ಹೊಂದಿದಕ್ಕೆ ಅನುಗ್ರಹ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕೊಪ್ಪಳದ ತಾಪಂ ಕಚೇರಿಯಲ್ಲಿ ಯಲಬುರ್ಗಾದ ಶ್ರೀ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿಗೆ ಶನಿವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿ, ಈ ಬಾರಿ ಅತೀ ಹೆಚ್ಚು ಮಳೆಯಾಗಿದ್ದರಿಂದ ಕುರಿ, ಮೇಕೆಗಳು ಕಾಲು ಬಾಯಿಬೇನೆಯಿಂದ ಮೃತಪಟ್ಟಿವೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೃತಪಟ್ಟ ಕುರಿ, ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಿ ಕುರಿಗಾರರಿಗೆ ಆರ್ಥಿಕ ಬಲ ತುಂಬುತ್ತಿದ್ದರು. ಆದರೆ 2020-21ನೇ ಸಾಲಿನಲ್ಲಿ ಈ ಯೋಜನೆಯನ್ನು ಮುಂದುವರಿಸದೇ ಇರುವುದರಿಂದ ಕುರಿ, ಮೇಕೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಕುರಿ ಮೇಕೆಗಳಿಗೆ ಬರುವ ಔಷಧಗಳನ್ನು ಕರಿಗಾರರ ಸಂಘಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಶಿವಪ್ಪ ದಂಡಿನ, ಸಿದ್ದಪ್ಪ ಹಿರೇಕುರಬರ, ಬೀರಪ್ಪ ಹಿರೇಕುರಬರ, ಸಿದ್ದಪ್ಪ ಬಂಡಿಹಾಳ, ರೇವಣೆಪ್ಪ ಕಲ್ಲೂರ, ದ್ಯಾಮಣ್ಣ ಪರಂಗಿ, ಸುರೇಶ, ಬಾಳಪ್ಪ, ರಾಜಪ್ಪ, ಮುತ್ತಪ್ಪ, ಶಿವಪ್ಪ, ಗುಡದಪ್ಪ, ಚಿನ್ನಪ್ಪ ಮಾರನಾಳ, ದ್ಯಾಮಣ್ಣ, ಬಸವರಾಜ, ದೇವರಾಜ ಇದ್ದರು.