ಯಲಬುರ್ಗಾ: ವಿದ್ಯುತ್ ದರ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಕರವೇ ಯುವಸೇನೆ ತಾಲೂಕು ಘಟಕದಿಂದ ಪಟ್ಟಣದ ಶಿರಸ್ತೇದಾರ್ ಹಸೇನ್ಸಾಬ್ ಗುಳೇದಗುಡ್ಡ ಅವರ ಮೂಲಕ ಶುಕ್ರವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ತಾಲೂಕು ಅಧ್ಯಕ್ಷ ಶಿವುಕುಮಾರ ನಾಗನಗೌಡ್ರ ಮಾತನಾಡಿ, ಕರೊನಾದಿಂದ ಜನ ಸಾಮಾನ್ಯರ ಬದುಕು ತತ್ತರಿಸಿ ಹೋಗಿದೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬಡವರು, ವ್ಯಾಪಾರಿಗಳು ಮತ್ತು ಮಧ್ಯಮ ವರ್ಗದವರು ಸಂಕಷ್ಟ ಎದುರಿಸುತ್ತಿದ್ದಾರೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ವಿದ್ಯುತ್ ದರ ಪ್ರತಿ ಯುನಿಟ್ಗೆ 40 ಪೈಸೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡು ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ಕೂಡಲೇ ಈ ನಿರ್ಧಾರ ಕೈಬಿಡಬೇಕು ಇಲ್ಲವಾದರೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿನ ಜೆಸ್ಕಾಂ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಘಟನೆ ಪದಾಧಿಕಾರಿಗಳಾದ ಶಿವುಕುಮಾರ ನಿಡಗುಂದಿ, ಭೀಮೇಶ್ ಬಂಡಿವಡ್ಡರ್, ಘನವಂತೇಶ ಚನ್ನದಾಸರ್, ಮಂಜು ಕುರಿ, ಶ್ರೀಕಾಂತ ಬಣಕಾರ್, ಶ್ರೀಶೈಲ ಗಾಣಿಗೇರ್, ಬಸವರಾಜ ಭಾವಿಮನಿ, ಶರಣಪ್ಪ ಇನ್ನಿತರರಿದ್ದರು.