ಯಲಬುರ್ಗಾ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭೂಸೇನಾ ನಿಗಮದಿಂದ ಕಾಮಗಾರಿ ಮಾಡದೆ ನೂರು ಕೋಟಿ ರೂ. ಲೂಟಿ ಹೊಡೆಯಲಾಯಿತು. ಇದಕ್ಕೆ ಅಂದಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ತಾಲೂಕಿನ ಗುತ್ತೂರು, ಚಿಕ್ಕಮ್ಯಾಗೇರಿ ಮತ್ತು ಮಲಕಸಮುದ್ರ ಗ್ರಾಮದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ನವರು ರೈತಪರ ಎಳ್ಳಷ್ಟೂ ಕಾಳಜಿ ವಹಿಸಲಿಲ್ಲ. ಆದರೆ, ಕ್ಷೇತ್ರವನ್ನು ಸಿಂಗಾಪುರ, ದುಬೈ ಮಾದರಿ ಮಾಡುವ ಕನಸು ಕಾಣುತ್ತಾರೆ. ಬಿಜೆಪಿ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ನೀರಾವರಿ ಹಾಗೂ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಏತ ನೀರಾವರಿಗೆ ನಯಾ ಪೈಸೆ ಅನುದಾನ ನೀಡಿದ್ದರ ಕುರಿತು ದಾಖಲಾತಿ ಬಹಿರಂಗ ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲೆಸೆದರು.