ಸುಬ್ರಹ್ಮಣ್ಯ: ಹವ್ಯಾಸಿ ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ ಇಲ್ಲಿಗೆ ಸಮೀಪದ ಕುಲ್ಕುಂದದಲ್ಲಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕುಲ್ಕುಂದದಲ್ಲಿ ಸ್ಕೂಟರಿನಲ್ಲಿ ಬರುತ್ತಿದ್ದಾಗ ಕಡವೆ ಅಡ್ಡ ಬಂದು, ಸ್ಕೂಟರ್ ಪಲ್ಟಿಯಾಗಿ, ರಾಮಚಂದ್ರರು ಸ್ಥಳದಲ್ಲೇ ಅಸು ನೀಗಿದರೆ, ಸಹೋದರ ರವಿ ಅವರಿಗೂ ಗಾಯಗಳಾಗಿವೆ. ರಾಮಚಂದ್ರ ಅರ್ಬಿತ್ತಾಯ ಅವರು ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರ ಸೋದರಳಿಯ ಹಾಗೂ ಶಿಷ್ಯರಾಗಿದ್ದರು. ಕುಕ್ಕೆ ಸುಬ್ರಹ್ಮಣ್ಯ-ಸುಳ್ಯ ಪರಿಸರದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದ ರಾಮಚಂದ್ರ ಅರ್ಬಿತ್ತಾಯರು ತಾಯಿ, ತಂಗಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಕುಮಾರಸ್ವಾಮಿ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್, ಶಟ್ಲ್ ಆಟಗಾರನೂ ಆಗಿದ್ದ ರಾಮಚಂದ್ರ ಅರ್ಬಿತ್ತಾಯರೇ ಅವರ ಕುಟುಂಬಕ್ಕೆ ಆಸರೆಯಾಗಿದ್ದರು.