ಯಾದಗಿರಿ: ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಕನ್ನಡಿಗರು ಜಾಗೃತರಾಗುವ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಬಸವರಾಜಪ್ಪಗೌಡ ಕ್ಯಾತನಾಳ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಕಸಾಪ ಏರ್ಪಡಿಸಿದ್ದ ಸಿದ್ದಲಿಂಗಮ್ಮ ಸಿದ್ದಣ್ಣಗೌಡ ಕ್ಯಾತನಾಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಜಾಮನ ಕಾಲದಲ್ಲಿ ಹೊರಗೆ ಉರ್ದು ನಾಮಫಲಕ ಹಾಕಿ ತರಗತಿಯಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸಲಾಗುತ್ತಿತ್ತು. ಈಗ ದೇಶ ಸ್ವತಂತ್ರಗೊಂಡರೂ ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರಲ್ಲೂ ಕನ್ನಡಾಭಿಮಾನ ಮೂಡಬೇಕು. ಅಖಂಡ ಕರ್ನಾಟಕದ ಸಮಗ್ರತೆ ಮತ್ತು ಏಕತೆಯಿಂದ ಭಾಷೆ, ನೆಲ, ಸಂಸ್ಕೃತಿ, ಉಳಿಯುವಂಥ ಚಿಂತನ-ಮಂಥನ ಕಾರ್ಯಕ್ರಮಗಳನ್ನು ಪರಿಷತ್ ಹೆಚ್ಚೆಚ್ಚು ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಸುರೇಶ ತಡಿಬಿಡಿ ಉಪನ್ಯಾಸ ನೀಡಿ, ಕಾವೇರಿಯಿಂದ ಗೋದಾವರಿವರೆಗೆ ಕನ್ನಡದ ಭೌಗೋಳಿಕ ನೆಲೆ ಹೊಂದಿದ್ದ ಕರುನಾಡು ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ. ಭಾಷೆಯ ಉಗಮ ಗೌಪ್ಯವಾದದ್ದು ಹಲ್ಮಿಡಿ ಶಾಸನ ಹಾಗೂ ಕವಿರಾಜ ಮಾರ್ಗ ಕನ್ನಡದ ಮೊಟ್ಟಮೊದಲ ಶಾಸನ ಮತ್ತು ಕೃತಿಯಾಗಿದೆ. ೨೦೦೦ ವರ್ಷದ ಇತಿಹಾಸವಿರುವ ಭಾಷೆ ನಮ್ಮದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪ್ರಮುಖರಾದ ಸಚಿನ್ಗೌಡ ಕ್ಯಾತನಾಳ, ಮಹಿಪಾಲರೆಡ್ಡಿ ಪಾಟೀಲ್ï ದುಪ್ಪಲ್ಲಿ, ಸೋಮಶೇಖರ ಮಣ್ಣೂರ, ಸಿ.ಎಂ. ಪಟ್ಟೇದಾರ, ಚನ್ನಪ್ಪಗೌಡ ಮೋಸಂಬಿ, ಗುರಪ್ಪಾಚಾರ್ಯ ವಿಶ್ವಕರ್ಮ, ಶರಣಗೌಡ ಅನಕಸೂಗುರ, ಶ್ರೀಶೈಲ ಪೂಜಾರಿ, ಈಶ್ವರಪ್ಪ ಹೋರುಂಚ, ವಿಶ್ವನಾಥ ಗುಡೂರ, ನೂರಂದಪ್ಪ ಲೇವಡಿ, ಕಾರ್ತಿಕ ಪತ್ತಾರ, ನಾಗೇಂದ್ರಪ್ಪ ಜಾಜಿ, ಚನ್ನಪ್ಪ ಠಾಣಗುಂದಿ, ವೀರಭದ್ರಪ್ಪ ಮೋಟಾರ, ವಿಜಯಲಕ್ದ್ಮೀ, ರಾಮಗಿರಿಮಠ, ಸ್ವಪ್ನಾ ಲೇವಡಿ, ಬಸನಗೌಡ ಪಾಟೀಲ್, ವೆಂಕಟೇಶ ಶೆಟ್ಟಿ, ಸೋಪಣ್ಣ, ವಿ.ಟಿ.ದಾಸನಕೇರಿ ಇದ್ದರು.