ಬೀದರ್: ಉಚಿತ ಆರೋಗ್ಯ ತಪಾಸಣೆ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅಕ್ಕಮಹಾದೇವಿ ವೃದ್ಧಾಶ್ರಮದ ಅಧ್ಯಕ್ಷೆ ಸಿದ್ದಮ್ಮ ಗಾದಗಿ ಹೇಳಿದರು.
ಅಕ್ಕಮಹಾದೇವಿ ಯುವತಿ ಮಂಡಳ ಗಾದಗಿ ಹಾಗೂ ಬೀದರ್ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಡಿ ಮಹೇಶ ನಗರದ ಅಕ್ಕಮಹಾದೇವಿ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು. ರೋಗ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೃದ್ಧರು ತಮ್ಮ ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಯಮಿತ ಆಹಾರ-ವಿಹಾರ ಮಾಡಿ ಸಕಾರಾತ್ಮಕ ಚಿಂತನೆಗಳೊಂದಿಗೆ ಬದುಕಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ ಕಾಲೇಜಿನ ಡಾ.ಆದರ್ಶ ಮಾತನಾಡಿ, ಸಕ್ಕರೆ ಕಾಯಿಲೆ, ರಕ್ತದೋತ್ತಡ ಇತರ ಸಮಸ್ಯೆಗಳು ವೃದ್ಧರನ್ನು ಕಾಡುತ್ತವೆ. ಅವುಗಳಿಂದ ಮುಕ್ತಿ ಪಡೆಯಲು ನಿಯಮಿತವಾಗಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಡಾ.ವೀರೇಶ, ನಸ್೯ಗಳಾದ ರಾಧಿಕಾ, ಸಂಗೀತಾ, ಅಶ್ವಿನಿ, ಭಾರತಿ ಅವರು ಹಿರಿಯರಿಗೆ ವಿವಿಧ ಪರೀಕ್ಷೆ ಮಾಡಿ ಔಷಧ ವಿತರಿಸಿದರು. ಆರೋಗ್ಯ ನೀರಿಕ್ಷಕ ರಾಜಶೇಖರ ನಿರೂಪಣೆ ಮಾಡಿ ವಂದಿಸಿದರು.