ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ 95ನೇ ಪುಣ್ಯಾರಾಧನೆ ನಿಮಿತ್ತ ಸೆ.16ರಿಂದ 18ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
16ರಂದು ಬೆಳಗ್ಗೆ 8ಕ್ಕೆ ಪರಮೇಶ್ವರ, ಅಮೋಘಸಿದ್ಧೇಶ್ವರ, ಸಂಗನಬಸವೇಶ್ವರ ಹಾಗೂ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗಳ ಮೆರವಣಿಗೆ ನಡೆಯಲಿದೆ. 17ರಂದು ಬೆಳಗ್ಗೆ 5ಕ್ಕೆ ಶಂಕರಲಿಂಗ ಮಹಾಶಿವಯೋಗಿಗಳು, ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಅಭಿಷೇಕ, 9.30ಕ್ಕೆ ಬಂಥನಾಳದ ಡಾ.ವೃಷಭಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ಸಿದ್ಧಲಿಂಗ ಮಹಾರಾಜರ ನವೀಕೃತ ಗುಂಪಾ ಉದ್ಘಾಟನೆ ನಡೆಯಲಿದೆ. ಯರನಾಳದ ಗುರು ಸಂಗನಬಸವ ಶಿವಯೋಗಿಗಳು, ಮುಗಳಖೋಡದ ಮುರುಘೇಂದ್ರ ಶಿವಯೋಗಿಗಳು, ಹಳಿಂಗಳಿ ಶಿವಾನಂದ ಮಹಾಶಿವಯೋಗಿಗಳು, ಗೊಳಸಾರದ ಅಭಿನವ ಪುಂಡಲಿಂಗ ಸ್ವಾಮೀಜಿ, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಅಗರಖೇಡದ ಅಭಿನವ ಪ್ರಭಲಿಂಗೇಶ್ವರ ಮಹಾಸ್ವಾಮಿ ಸೇರಿ ವಿವಿಧ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಉದ್ಯಮಿ ಬಾಬುಗೌಡ ಬಿರಾದಾರ ಪಾಲ್ಗೊಳ್ಳಲಿದ್ದಾರೆ. 10ಕ್ಕೆ ಮಠದ ದಾಸೋಹ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ.
ಸಂಜೆ 5ಕ್ಕೆ ಪುರಾಣ ಮಂಗಲೋತ್ಸವ ನಡೆಯಲಿದ್ದು, ಬಂಥನಾಳದ ವೃಷಭಲಿಂಗ ಮಹಾಶಿವಯೋಗಿಗಳು, ಅಚಲೇರಿಯ ಬಸವರಾಜೇಂದ್ರ ಸ್ವಾಮೀಜಿ, ಶ್ಯಾವಳದ ವಿಠ್ಠಲಲಿಂಗ ಮಹಾರಾಜರು ಸಾನ್ನಿಧ್ಯ ವಹಿಸುವರು. ಹಳಿಂಗಳಿ ಶಿವಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಹೂವಿನಹಿಪ್ಪರಗಿಯ ಮಾತೋಶ್ರೀ ದಾಕ್ಷಾಯಿಣಿ ಅಮ್ಮನವರು, ರಾಜ್ಯದ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಲಿಂಗಯ್ಯ ಮಠ, ಧಾರವಾಡದ ಕೆ.ಎ.ಎಸ್. ಪರೀಕ್ಷಾರ್ಥ ಅಧಿಕಾರಿ ಅನುರಾಧಾ ಮಠ ಭಾಗವಹಿಸುವರು. ರಾತ್ರಿ 9ರಿಂದ ಬೆಳಗಿನವರೆಗೆ ವಿವಿಧ ಭಜನಾ ಕಲಾ ತಂಡದಿಂದ ಸಾಮೂಹಿಕ ನಿರಂತರ ಭಜನೆ ನಡೆಯಲಿದೆ.
18ರಂದು ಬೆಳಗ್ಗೆ 10ಕ್ಕೆ ಬಂಥನಾಳದ ಡಾ.ವೃಷಭಲಿಂಗ ಶಿವಯೋಗಿಗಳ ಪಾದಪೂಜೆಯನ್ನು ಸೊಲ್ಲಾಪುರದ ಬಸವರಾಜ ಸಿದ್ರಾಮಪ್ಪ ಕರಜಗಿಕರ ದಂಪತಿ ನೆರವೇರಿಸುವರು. ಸಂಜೆ 5ಕ್ಕೆ ಬಂಥನಾಳದ ಲಿಂ.ಸಂಗನಬಸವ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.