ಗುಂಡ್ಲುಪೇಟೆ : ತಾಲೂಕಿನಾದ್ಯಂತ ಹೊಸ ವರ್ಷದ ಅಂಗವಾಗಿ ಪಟ್ಟಣದ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿದವು.
ಶಕ್ತಿ ಯೋಜನೆಯ ಪರಿಣಾಮವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳತ್ತ ಮುಖ ಮಾಡಿದ್ದರು. ಹೊಸ ವರ್ಷದ ಅಂಗವಾಗಿ ಮಹಿಳೆಯರು ತಮ್ಮ ಮಕ್ಕಳು ಹಾಗೂ ಕುಟುಂಬದ ಜತೆಗೂಡಿ ಆಗಮಿಸಿದ್ದರಿಂದ ಎಲ್ಲ ದೇವಾಲಯಗಳೂ ಭಕ್ತರಿಂದ ಕಿಕ್ಕಿರಿದು ತುಬಿದ್ದವು. ಪಟ್ಟಣದ ಶ್ರೀ ವಿಜಯನಾರಾಯಣ, ಶ್ರೀ ರಾಮೇಶ್ವರ, ಅಯ್ಯಪ್ಪ ಹಾಗೂ ಶಕ್ತಿಶಾಲಿ ಆಂಜನೇಯ, ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸ್ಕಂದಗಿರಿ ಪಾರ್ವತಾಂಬೆ ಬೆಟ್ಟ, ತ್ರಿಯಂಭಕಪುರ, ಹುಲಿಗಿನೆಮೊರಡಿ ವೆಂಕಟರಮಣಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಯುವಕರು ತಾಳವಾಡಿಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟ, ಬಿಳಿಗಿರಿರಂಗಸ್ವಾಮಿ ಮತ್ತು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದರು.