ತೆಲಸಂಗ: ಗ್ರಾಮದ ಅಂಬೇಡ್ಕರ್ ವೃತ್ತದಿಂದ ಹೆದ್ದಾರಿ ಸಂಪರ್ಕಿಸುವ ಗೋಠೆ ರಸ್ತೆ ಹದಗೆಟ್ಟ ಪರಿಣಾಮ ರೈತರ ಓಡಾಟಕ್ಕೆ ತೊಂದರೆಯಾಗಿದ್ದು, ತಕ್ಷಣ ರಸ್ತೆ ರಿಪೇರಿ ಮಾಡಿಕೊಡಬೇಕೆಂದು ಗ್ರಾಮಸ್ಥರು ತಾಲೂಕಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ರಸ್ತೆಯನ್ನು ಹೊರತುಪಡಿಸಿ ಹೊಲಗದ್ದೆಗಳಿಗೆ ತೆರಳಲು ಪರ್ಯಾಯ ಮಾರ್ಗವಿಲ್ಲ. ಮಳೆ ಸುರಿದರೆ ವಾಹನಗಳ ಓಡಾಟ ಅಸಾಧ್ಯ. ಕೃಷಿ ಕೆಲಸಕ್ಕೆ ತೆರಳುವ ರೈತರು ಹೈರಾಣಾಗುತ್ತಿದ್ದಾರೆ. ಇದು ಕೇವಲ ವರ್ಷದ ಸಮಸ್ಯೆ ಅಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ರೈತರ ಓಡಾಟಕ್ಕೆ ತೊಂದರೆ ತಪ್ಪಿದ್ದಲ್ಲ. ಅದೆಷ್ಟೋ ಬಾರಿ ಗ್ರಾಪಂ ಅಧಿಕಾರಿಗಳಿಗೆ ವಿನಂತಿಸಿದರೂ ಇತ್ತ ಗಮನಹರಿಸುವವರಿಲ್ಲ.
ಕಾಲ್ನಡಿಗೆಯಲ್ಲಿಯೇ ಈ ರಸ್ತೆಯಲ್ಲಿ ನಡೆಯಲು ಬಾರದ ಸ್ಥಿತಿ ಇರುವಾಗ ಟ್ರ್ಯಾಕ್ಟರ್, ಬೈಕ್ ಓಡಿಸಲು ಸಾಧ್ಯವೇ ಇಲ್ಲ. ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ಯಾವೊಂದು ವಾಹನ ಬಾರದ ಸ್ಥಿತಿ ಬಂದೊದಗಿದೆ. ಯಾವುದೇ ವಸ್ತು ಸಾಗಿಸುವುದು ದುಸ್ಸಾಧ್ಯವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ
ಆಡಳಿತ ವರ್ಗ ಜಾಣ ಕಿವುಡರಾಗಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಲ್ಲದೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ರಸ್ತೆಗಳನ್ನು ಹಂತ-ಹಂತವಾಗಿ ಪರಿಸ್ಥಿತಿ ಆಧಾರದ ಮೇಲೆ ರಿಪೇರಿ ಮಾಡಲಾಗುತ್ತಿದೆ. ಗೋಠೆ ರಸ್ತೆಯ ಸ್ಥಿತಿ ಹದಗೆಟ್ಟಿದ್ದು ಮೇಲಧಿಕಾರಿಗಳ ಗಮನಕ್ಕೆ ತಂದು, ತುರ್ತಾಗಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
| ಬೀರಪ್ಪ ಕಡಗಂಚಿ ಪಿಡಿಒ, ತೆಲಸಂಗ
ಮನುಷ್ಯರ ಓಡಾಟವೇ ದುಸ್ತರವಾಗಿದ್ದು, ಕೃಷಿ ಸಲಕರಣೆ ಸಾಗಿಸುವಲ್ಲಿ ಎದುರಾಗುವ ಸಮಸ್ಯೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸ್ಪಂದಿಸದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟ ಅನಿವಾರ್ಯ.
| ಸದಾನಂದ ಜಿ.ಕೆ. ಯುವ ರೈತ ತೆಲಸಂಗ