ಕಂಪ್ಲಿ: ಕೆಲಸದ ಅವಧಿ 8 ರಿಂದ 12 ಗಂಟೆಗೆ ಹೆಚ್ಚಿಸದಿರುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೆಟ್ರಿ ಗ್ರಾಪಂ ಕಚೇರಿ ಮುಂದೆ ಪಂಚಾಯಿತಿ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ಪ್ರತಿಭಟನೆ ನಡೆಸಿದರು.
ಮಾಸಿಕ ವೇತನದಲ್ಲಿ ಆರು ದಿನಗಳ ಸಂಬಳ ಮುರುವಳಿ ಮಾಡಬಾರದು. ಸರ್ಕಾರ ಗ್ರಾಪಂ ಸಿಬ್ಬಂದಿ ವೇತನಕ್ಕಾಗಿ ಅವಶ್ಯವಿರುವ 382 ಕೋಟಿ ರೂ. ಬಿಡುಗಡೆ ಮಾಡಬೇಕು. ಕರೊನಾ ನಿಯಂತ್ರಣಕ್ಕಾಗಿ ಟಾಸ್ಕ್ಫೋರ್ಸ್ನಲ್ಲಿ ಗ್ರಾಪಂ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ವಿಮೆ ಸೌಲಭ್ಯ ಒದಗಿಸಬೇಕು. ಅನೇಕ ಕಡೆಗಳಲ್ಲಿ ಕರೊನಾ ನಿಯಂತ್ರಣ ಸೇವೆಯಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರ ಮೇಲಿನ ಹಲ್ಲೆ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಮನವಿಯನ್ನು ಸಿಎಂ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಇಮೇಲ್ ಮಾಡಲಾಯಿತು. ಗ್ರಾಪಂ ಸಿಬ್ಬಂದಿ ಎಚ್.ಶಿವು ಮೆಟ್ರಿ, ಜಿ.ಷಣ್ಮುಖರೆಡ್ಡಿ, ತಿರುಮಲಯ್ಯ, ಸಿ.ಡಿ.ಸಾದಪ್ಪ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಭಾಗ್ಯಮ್ಮ, ಬಗ್ಗೂರಮ್ಮ, ವಿಜಯಲಕ್ಷ್ಮಿ, ಲತಾ, ನಿವೇದಿತಾ, ಸೌಭಾಗ್ಯಲಕ್ಷ್ಮೀ ಇದ್ದರು.