ಭಾದೋಹಿ: ಪತಿಯೊಂದಿಗೆ ಜಗಳವಾಡಿದ ಮಹಿಳೆ ಮಕ್ಕಳ ಜೀವಕ್ಕೆ ಅಪಾಯವನ್ನುಂಟು ಮಾಡಿದ ಘಟನೆ ಉತ್ತರ ಪ್ರದೇಶದ ಭಾದೋಹಿಯಲ್ಲಿ ನಡೆದಿದೆ .
ಈ ದಂಪತಿಯ ಮಧ್ಯೆ ಸದಾ ಜಗಳ ಆಗುತ್ತಿತ್ತು. ಶನಿವಾರ ರಾತ್ರಿಯೂ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಅದಾದ ಮೇಲೆ ಮಹಿಳೆ ತಮ್ಮ ಐವರು ಮಕ್ಕಳನ್ನು ಕರೆದುಕೊಂಡು ಹೋಗಿ ಗಂಗಾ ನದಿಗೆ ಎಸೆದಿದ್ದಾರೆ.
ಆರೋಪಿ ಮಹಿಳೆ ಮಂಜು ಯಾದವ್ ಮತ್ತು ಪತಿ ಮೃದುಲ್ ಯಾದವ್ ನಡುವೆ ಕೌಟುಂಬಿಕ ವಿಚಾರವೊಂದಕ್ಕೆ ಕಳೆದ ಒಂದು ವರ್ಷಗಳಿಂದಲೂ ಮನಸ್ತಾಪ ಉಂಟಾಗಿತ್ತು. ಶನಿವಾರ ರಾತ್ರಿಯ ಜಗಳದ ಬಳಿಕ ಮಂಜು ಜಹಂಗಿರಾಬಾದ್ ಘಾಟ್ನಲ್ಲಿ ಹರಿಯುತ್ತಿರುವ ಗಂಗಾ ನದಿ ನೀರಿಗೆ ಐವರು ಮಕ್ಕಳನ್ನು ಎಸೆದಿದ್ದಾರೆ. ನೀರಿನಲ್ಲಿ ಬಿದ್ದ ಮಕ್ಕಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಮೀನುಗಾರರು ಈ ಮಹಿಳೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವದನ್ನು ನೋಡಿದ್ದಾರೆ. ನೀರಿಗೆ ಎಸೆದಿದ್ದನ್ನೂ ನೋಡಿದ್ದಾರೆ. ಆದರೆ ಅವರೆಲ್ಲ ಈ ಮಹಿಳೆ ಮಾಟಗಾತಿ ಎಂದು ತಿಳಿದುಕೊಂಡು ಮಕ್ಕಳ ರಕ್ಷಣೆ ಮಾಡಲು ಮುಂದಾಗಲಿಲ್ಲ. ಮಹಿಳೆಯನ್ನೂ ಪ್ರಶ್ನೆ ಮಾಡಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳನ್ನೆಲ್ಲ ನದಿಗೆ ಎಸೆದ ಆಕೆ ರಾತ್ರಿಪೂರ್ತಿ ನದಿ ದಡದಲ್ಲಿಯೇ ಕುಳಿತಿದ್ದಳು. ಬೆಳಗ್ಗೆ ಸ್ಥಳೀಯ ಜನರಿಗೆ ಘಟನೆ ಬಗ್ಗೆ ವಿವರಿಸಿದ್ದಾಳೆ. (ಏಜೆನ್ಸೀಸ್)