ಒಡಿಶಾ: ಬಾಲಸೋರ್ ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರೈಲ್ವೆ ಇಲಾಖೆ ಹಾಗೂ ಒಡಿಶಾ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತವನ್ನು ಪಡೆಯಲು ಹೋಗಿ ಮಹಿಳೆ ಒಬ್ಬರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಘಟನೆಯೂ ಒಡಿಶಾದ ಕಟಕ್ ಜಿಲ್ಲೆಯ ಮಣಿಯಬಂಧದಲ್ಲಿ ನಡೆದಿದ್ದು ಪೇಚಿಗೆ ಸಿಲುಕಿರುವವರನ್ನು ಗೀತಾಂಜಲಿ ದತ್ತಾ ಎಂದು ಗುರುತಿಸಲಾಗಿದ್ದು ಪೊಲೀಸರು ಪರಾರಿಯಾಗಿರುವ ಮಹಿಳೆಗಾಗಿ ತಲಾಶ್ ನಡೆಸಿದ್ಧಾರೆ.
ಪ್ರಕರಣದ ಹಿನ್ನಲೆ?
ಕಳೆದ ಶುಕ್ರವಾರ ಸಂಭವಿಸಿದ ಬಾಲಸೋರ್ ರೈಲು ದುರಂತದಲ್ಲಿ ತನ್ನ ಪತಿ ಬಿಜಯ್ ದತ್ತಾ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಹಿಳೆ ಶವ ಒಂದನ್ನು ಗುರುತಿಸಿದ್ದರು. ಆ ಬಳಿಕ ಅಧಿಕಾರಿಗಳು ಮೃತ ವ್ಯಕ್ತಿಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮಹಿಳೆ ಸುಳ್ಳು ಹೇಳಿರುವುದು ಕಂಡು ಬಂದ ಕಾರಣ ಆಕೆಗೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ತಾನು ಬದುಕಿರುವಾಗಲೇ ತನ್ನ ಪತ್ನಿ ಈ ರೀತಿ ಮಾಡಿದ್ದನ್ನು ತಿಳಿದು ಮಣಿಯಬಂಧ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿ ಬಿಜಯ್ ದತ್ತಾ ಈ ಕುರಿತು ದೂರು ದಾಖಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಕಳೆದ 13 ವರ್ಷಗಳಿಂದ ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉಚಿತ ವಿದ್ಯುತ್ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್
ಕಠಿಣ ಕ್ರಮಕ್ಕೆ ಸೂಚನೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಣಿಯಬಂಧ ಪೊಲೀಸ್ ಠಾಣಾಧಿಕಾರಿ ಬಸಂತ್ ಕುಮಾರ್ ಸತ್ಪತಿ ಮೃತದೇಹಗಳನ್ನು ತಮ್ಮವರದ್ದು ಎಂದು ಹೇಳಿಕೊಳ್ಳುತ್ತಾ ಹಲವರು ಪರಿಹಾರವನ್ನು ಮೊತ್ತವನ್ನು ಪಡೆಯಲು ಸುಳ್ಳನ್ನು ಪ್ರತಿಪಾದಿಸುತ್ತಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯ ಪತಿ ದೂರು ದಾಖಲಿಸುವಂತೆ ಸೂಚಿಸಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ಧಾರೆ. ಆರೋಪಿತ ಮಹಿಳೆ ಪರಾರಿಯಾಗಿದ್ದು ಈ ಸಂಬಂಧ ಅವರನ್ನು ಪತ್ತೆಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಮಣಿಯಬಂಧ ಪೊಲೀಸ್ ಠಾಣಾಧಿಕಾರಿ ಬಸಂತ್ ಕುಮಾರ್ ಸತ್ಪತಿ ತಿಳಿಸಿದ್ದಾರೆ.