ಸಿಂಧನೂರು: ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾದದ್ದು, ಸಬಲತೆ ಎಂದರೆ ಬದುಕಿನ ಪರಿಪೂರ್ಣ ಜ್ಞಾನವು ಆಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಸಬಿಹಾ ಭೂಮಿಗೌಡ ಹೇಳಿದರು.
ನಗರದ ಸತ್ಯಗಾರ್ಡನ್ನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ದುದ್ದುಪೂಡಿ ಮಹಿಳಾ ಕಾಲೇಜು, ಶಾರದಾ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಮಹಿಳಾ ಮಹಾವಿದ್ಯಾಲಯ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಮಹಿಳಾ ದಿನಾಚರಣೆ ಹಾಗೂ ಆಹಾರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಬಲತೆ ಎನ್ನುವುದು ಸ್ತ್ರೀ, ಪುರುಷರಿಬ್ಬರೂ ಸಮಾಜದಲ್ಲಿ ಬದುಕಲು ಬೇಕಾದ ಶಕ್ತಿಯಾಗಿದೆ. ಹಿಂದಿನ ಮಹಿಳೆಯರ ಜೀವನಕ್ಕಿಂತ ಇಂದಿನ ಮಹಿಳೆಯರ ಜೀವನ ತೃಪ್ತಿದಾಯಕವಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಿಗುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವೆ ಆರ್.ಸುನಂದಮ್ಮ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಿ.ಎಂ.ಮದರಿ, ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್, ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ವಿವರಿಸಿದರು. ಶಾರದಾ ಕಾಲೇಜು ಪ್ರಾಚಾರ್ಯ ಬಸವರಾಜ ಬಾದರ್ಲಿ, ಸಂಸ್ಥೆ ಅಧ್ಯಕ್ಷ ಎನ್.ಶಿವನಾಗಪ್ಪ, ಸರ್ಕಾರಿ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ನೂರ್ಪಾಷಾ, ದುದ್ದುಪೂಡಿ ಕಾಲೇಜ್ ಪ್ರಾಚಾರ್ಯ ಆನಂದ ಕೆ.ಪುರೋಹಿತ್ ಇದ್ದರು.