ಕುಕನೂರು: ಅನಧೀಕೃತ ವಿಂಡ್ ಫ್ಯಾನ್ಗಳನ್ನು ತೆರವುಗೊಳಸುವಂತೆ ಒತ್ತಾಯಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿಗೆ ಸೊಮವಾರ ಮನವಿ ಸಲ್ಲಿಸಿದರು.
ತಾಲೂಕಿನ ಸುತ್ತಲಿನ ಗ್ರಾಮಗಳ ಜಮೀನಿನಲ್ಲಿ ರೀನಿವ್ ಕಂಪನಿಯು ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ನೂರಾರೂ ಎಕರೆ ಫಲವತ್ತಾದ ಕಪ್ಪು ಮತ್ತು ಕೆಂಪು ಮಣ್ಣಿನ ಜಮೀನಿನಲ್ಲಿ ವಿಂಡ್ ಫ್ಯಾನ್ ಅಳವಡಿಸಿದ್ದಾರೆ. ಫಲವತ್ತಾದ ಜಮೀನುಗಳಲ್ಲಿ ರೈತರಿಗೆ ಹಣದ ಆಸೆ ತೋರಿಸಿ, ಕೆಲ ಏಜೆಂಟರ್ ಮತ್ತು ಕೆಳಮಟ್ಟದ ಅಧಿಕಾರಿಗಳು ಸೇರಿ ಕಂಪನಿಗೆ ಲಾಭ ಮಾಡುತ್ತಿದ್ದಾರೆ. ಜಮೀನಿನಲ್ಲಿ ರಸ್ತೆ ನಿರ್ಮಾಣ, ಅಗೆಯುವುದು, ಭಾರಿ ವಾಹನ ಸಂಚಾರ ನಡೆಸಿ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ವೇದಿಕೆಯ ಪ್ರಮುಖರು ದೂರಿದರು.
ಈ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಕ್ರಮ ಮುಂದಾಗದೆ ನಿರ್ಲಕ್ಷೃತನ ತೋರುತ್ತಿದ್ದಾರೆ. ಕಂಪನಿಗಳು ಮುಖ್ಯ ರಸ್ತೆಯಿಂದ ಸ್ಥಾಪಿಸಿರುವ ಪ್ಲಾಂಟ್ಗಳಿಗೆ ಬೃಹತ್ ವಾಹನಗಳ ಸಂಚಾರ ಮತ್ತು ಕಾರ್ಯ ಚಟುವಟಿಕೆಗಳಿಗೆ ರೈತರ ಜಮೀನುಗಳನ್ನು ರಸ್ತೆಗಳಾಗಿ ಮಾರ್ಪಾಡು ಮಾಡುತ್ತಿವೆ. ಇದರಿಂದ ರೈತರ ಹೊಲದ ಬದು ಹಾಗೂ ಅಳತೆಗಲ್ಲುಗಳು ಕಾಣೆಯಾಗಿದ್ದು, ಪ್ರತಿನಿತ್ಯ ಜಮೀನಿನ ಅಳತೆ ವಿಚಾರವಾಗಿ ಗಲಾಟೆಗಳು ನಡೆಯುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿ ರೈತರು ತಮ್ಮ ಜಮೀನುಗಳನ್ನೇ ಕಳೆದುಕೊಳ್ಳವ ಭೀತಿಯಲ್ಲಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ವಿಂಡ್ ಫ್ಯಾನ್ಗಳನ್ನು ತೆರವುಗೊಳಸಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವೇದಿಕೆ ಗೌರವಾಧ್ಯಕ್ಷ ರಾಮಣ್ಣ ಭಜಂತ್ರಿ, ಜಿಲ್ಲಾಧ್ಯಕ್ಷ ಕೃಷ್ಣ ಗಾವರಾಳ, ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ಚಲವಾದಿ, ತಾಲೂಕು ಅಧ್ಯಕ್ಷ ಶಿವಪ್ಪ ಹಾದಿ, ಅಜ್ಜಪ್ಪಗೌಡ ವೀರಾಪುರ ಇತರರಿದ್ದರು.