ವಿಜಯಪುರ: ಕಾಂಗ್ರೆಸ್ನ ಪ್ರಭಾವಿ ನಾಯಕರಿಬ್ಬರು ಬಿಜೆಪಿಗೆ ಬರುವರೆಂಬ ಗುಸುಗುಸು ಕೇಳಿ ಬರುತ್ತಿರುವ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅದಕ್ಕೆ ಪೂರಕವಾದ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ನಿಂದ ಇಬ್ಬರು ಬಿಜೆಪಿಗೆ ಬರುವುದಕ್ಕೆ ನಾಟಕ ಮಾಡುತ್ತಿದ್ದಾರೆಂದು ಗುರುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗೆ ಬರಲು ಬಹಳ ಮಂದಿ ಕಾಯುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇಬ್ಬರು ಬಿಜೆಪಿಗೆ ಬರಲು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಲೂಟಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ಇಂತಹ ಕಳ್ಳರು ಬಿಜೆಪಿಗೆ ಬರಬೇಕು ಅಂತಾ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಮಾಲಿ ಮಾಡೋದಕ್ಕೆ ಇದ್ದಾರಾ ಎಂದವರು ಪ್ರಶ್ನಿಸಿದರು. ಮೇಲಿನವರು ಇಂಥವರನ್ನೆಲ್ಲ ತೆಗೆದುಕೊಳ್ಳಬಾರದು. ಮೇಲಿನವರು ತೆಗೆದುಕೊಂಡರೆ ಕಾರ್ಯಕರ್ತರು ಮಾಡುತ್ತೇವಾ? ಕಳ್ಳರಿಗೆ ತೆಗೆದುಕೊಂಡರೆ ಸಿದ್ದಾಂತ ಎಲ್ಲಿ ಉಳಿಯುತ್ತದೆ ಎಂದರು.
ಇಂಡಿಯಲ್ಲಿ ಹತ್ತು ಹನ್ನೆರಡು ಕ್ಯಾಂಡಿಡೇಟ್ ಓಡಾಡುತ್ತವೆ. ಅವರಿಗೆ ದುಡಿಸಿದ್ದೀರಿ ನೀವು, ನೋಡಿ ಅವು ಸಾಲಾಗಿ ಕುಳಿತಿರುತ್ತವೆ. ಇಲ್ಲಿ ಬಬಲೇಶ್ವರದಲ್ಲೂ ಕುಳಿತಿರುತ್ತವೆ. ಕಾರಜೋಳ ಅವರು ಒಂದೆರೆಡು ಕ್ಯಾಂಡಿಡೇಟ್ ಹಿಡಿದುಕೊಂಡು ಬಂದಿದ್ದಾರೆ. ಮೊದಲನೇಯದ್ದು ಎರಡು ಕಾಂಡಿಡೇಟ್ ಬೇರೆ ಇವೆ. ಅಣ್ಣ ಕಾಂಗ್ರೆಸ್-ತಮ್ಮ ಬಿಜೆಪಿ. ಒಬ್ಬ ಸೋನಿಯಾಗಾಂಧಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ, ಮತ್ತೊಬ್ಬ ಮೋದಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾರೆ. ಇಂಥವರನ್ನೆಲ್ಲ ತೆಗೆದುಕೊಂಡರೆ ಕಾರ್ಯಕರ್ತರ ಗತಿ ಏನು ಎಂದರು. ಅಂದಹಾಗೆ ಶಾಸಕ ಯತ್ನಾಳ ಹೇಳಿದ ಆ ಇಬ್ಬರು ನಾಯಕರು ಕಾಂಗ್ರೆಸ್ನ ಶಾಸಕ ಶಿವಾನಂದ ಪಾಟೀಲ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಎಂದು ವಿಶ್ಲೇಷಿಸಲಾಗಿದೆ.