ಹಳೇಬೀಡು: ಇಲ್ಲಿನ ಐತಿಹಾಸಿಕ ದ್ವಾರಸಮುದ್ರ ಕೆರೆಯಲ್ಲಿ ಸೋಮವಾರ ಬೆಳಗ್ಗೆ ಕಾಡಾನೆ ಪ್ರತ್ಯಕ್ಷವಾಗಿದ್ದು ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದೆ.
ಭಾನುವಾರ ರಾತ್ರಿ ಹೋಬಳಿಯ ವಿವಿಧ ಭಾಗದಲ್ಲಿ ಸಂಚರಿಸಿರುವ ಒಂಟಿಸಲಗ, ಲಿಂಗಪ್ಪನ ಕೊಪ್ಪಲು ಹಾಗೂ ದ್ಯಾವಪ್ಪನಹಳ್ಳಿಯ ಕೃಷಿ ಜಮೀನುಗಳನ್ನು ದಾಟಿಕೊಂಡು ರಾಜಗೆರೆ ಬಳಿ ಕೆರೆಯೊಳಗೆ ಇಳಿದಿದೆ. ಹೊಸೂರು ಸಮೀಪ ಮೇಕೆಯನ್ನು ಸಾಯಿಸಿದ್ದು , ಕೆಲ ತೋಟದಲ್ಲಿ ಬಾಳೆಗಿಡಗಳನ್ನು ನಾಶಪಡಿಸಿದೆ. ಬಳಿಕ ನೀರು ಅರಸಿಕೊಂಡು ಬಂದು ದ್ವಾರಸಮುದ್ರ ಕೆರೆಯಲ್ಲಿ ವಿರಮಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸಾಪುರ ಸಮೀಪದಲ್ಲಿ ಬೀಡು ಬಿಟ್ಟಿದ್ದ ನಾಲ್ಕು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವಾಗ ಒಂದು ಆನೆ ತಪ್ಪಿಸಿಕೊಂಡು ಹಳೇಬೀಡು ಹೋಬಳಿಯಲ್ಲಿ ಅಡ್ದಾಡುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆನೆ ನೋಡಲು ಸೇರಿದ್ದ ಜನಜಂಗುಳಿಯನ್ನು ಪೊಲೀಸರು ನಿಯಂತ್ರಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.