ನವದೆಹಲಿ: ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಈ ಚುನಾವಣಾ ಬಾಂಡ್ಗಳಿಂದ ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ರಾಜಕೀಯ ಪಕ್ಷಗಳ ನಿಧಿಯ ಬಗ್ಗೆ ತಿಳಿದುಕೊಳ್ಳುವ ಹಕ್ಕು ದೇಶದ ಮತದಾರರಿಗೆ ಇದೆ. ಬಾಂಡ್ ಖರೀದಿದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸಬೇಕು, ಇದು ಪಾರದರ್ಶಕತೆಯನ್ನು ತರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರದ ಹಣ ಎಲ್ಲಿಂದ ಬರುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇದೆ. ಅನಾಮಧೇಯ ಚುನಾವಣಾ ಬಾಂಡ್ಗಳು ಮಾಹಿತಿ ಹಕ್ಕು ಮತ್ತು ಕಲಂ 19(1)(ಎ) ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹಾಗಾದರೆ ಚುನಾವಣಾ ಬಾಂಡ್ ಎಂದರೇನು, ಅದು ಯಾವಾಗ ಪ್ರಾರಂಭವಾಯಿತು ಮತ್ತು ವಿವಾದ ಉಲ್ಬಣಗೊಂಡು ಸುಪ್ರೀಂ ಕೋರ್ಟ್ಗೆ ಹೇಗೆ ತಲುಪಿತು ಎಂದು ತಿಳಿಯಿರಿ?
ಚುನಾವಣಾ ಬಾಂಡ್ ಎಂದರೇನು?
ಚುನಾವಣಾ ಬಾಂಡ್ ಒಂದು ರೀತಿಯ ಪ್ರಾಮಿಸರಿ ನೋಟು, ಅದರ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗುತ್ತದೆ. ಯಾವುದೇ ನಾಗರಿಕ ಅಥವಾ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಆಯ್ದ ಶಾಖೆಗಳಿಂದ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು ಮತ್ತು ತಮ್ಮ ಆಯ್ಕೆಯ ರಾಜಕೀಯ ಪಕ್ಷಕ್ಕೆ ಅನಾಮಧೇಯವಾಗಿ ದೇಣಿಗೆ ನೀಡಬಹುದು. ಅವರ ಹೆಸರನ್ನು ಸಾರ್ವಜನಿಕಗೊಳಿಸುವುದಿಲ್ಲ.
ಭಾರತ ಸರ್ಕಾರವು 2017 ರಲ್ಲಿ ಚುನಾವಣಾ ಬಾಂಡ್ಗಳನ್ನು ಘೋಷಿಸಿತು. ಅದನ್ನು ಜನವರಿ 2018 ರಿಂದ ಜಾರಿಗೆ ತಂದಿತು. ಈ ರೀತಿಯಾಗಿ ಎಸ್ಬಿಐ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಾಂಡ್ಗಳನ್ನು ಬಿಡುಗಡೆ ಮಾಡುತ್ತದೆ. ಈ ಯೋಜನೆಯ ಮೂಲಕ 1 ಸಾವಿರ, 10 ಸಾವಿರ, 1 ಲಕ್ಷದಿಂದ 1 ಕೋಟಿವರೆಗಿನ ವಿವಿಧ ಮೊತ್ತದ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು.
ಈ ಬಾಂಡ್ಗಳ ಅವಧಿ ಕೇವಲ 15 ದಿನಗಳು. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದು. ಇದಕ್ಕೂ ತನ್ನದೇ ಆದ ನಿಯಮಗಳಿವೆ. ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮಾತ್ರ ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ನೀಡಲಾಗುವುದು.
ಸಮಸ್ಯೆ ಎಲ್ಲಿಂದ ಪ್ರಾರಂಭವಾಯಿತು?
ಚುನಾವಣಾ ಬಾಂಡ್ಗಳನ್ನು ಬಿಡುಗಡೆ ಮಾಡುವಾಗ ಭಾರತ ಸರ್ಕಾರವು ಈ ಮೂಲಕ ದೇಶದಲ್ಲಿ ರಾಜಕೀಯ ನಿಧಿಯ ವ್ಯವಸ್ಥೆಯನ್ನು ರಚಿಸಲಾಗುವುದು ಎಂದು ಹೇಳಿತ್ತು. ಆದರೆ ಪ್ರಾರಂಭವಾದ ನಂತರ, ಈ ಯೋಜನೆಯು ಪ್ರಶ್ನಾರ್ಹವಾಗತೊಡಗಿತು. ಚುನಾವಣಾ ಬಾಂಡ್ಗಳ ಸಹಾಯದಿಂದ ದಾನಿಗಳ ಗುರುತನ್ನು ಗೌಪ್ಯವಾಗಿಡಲಾಗಿತ್ತು. ಆದರೆ ಇದು ಕಪ್ಪು ಹಣದ ಒಳಹರಿವನ್ನು ಉತ್ತೇಜಿಸಬಹುದು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಗುರುತನ್ನು ಬಹಿರಂಗಪಡಿಸದೆ ಹಣವನ್ನು ದೇಣಿಗೆ ನೀಡುವಂತೆ ಈ ಯೋಜನೆಯನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೊದಲ ಅರ್ಜಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಲಾಭರಹಿತ ಸಂಸ್ಥೆ ಕಾಮನ್ ಕಾಸ್ ಜಂಟಿಯಾಗಿ ಸಲ್ಲಿಸಿದೆ. ಎರಡನೇ ಅರ್ಜಿಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸಲ್ಲಿಸಿದೆ. ಭಾರತೀಯ ಮತ್ತು ವಿದೇಶಿ ಕಂಪನಿಗಳ ಮೂಲಕ ಪಡೆದ ದೇಣಿಗೆಗಳು ಅನಾಮಧೇಯ ನಿಧಿಗಳಾಗಿವೆ ಎಂದು ಅರ್ಜಿಗಳಲ್ಲಿ ಹೇಳಲಾಗಿದೆ.
‘ಇದು ಪವಾಡವೇ ಸರಿ’; ವೈದ್ಯರು ‘ಮೃತ’ ಎಂದು ಘೋಷಿಸಿ 15 ಗಂಟೆಗಳ ನಂತರ ಬದುಕುಳಿದ ಮಹಿಳೆ!