ಬೆಂಗಳೂರು: ತನ್ನ ನಾಲ್ಕು ವರ್ಷದ ಮುದ್ದಿನ ಪುತ್ರನನ್ನು ಗೋವಾದಲ್ಲಿ ಕೊಂದು, ಶವವನ್ನು ಬ್ಯಾಗ್ನಲ್ಲಿ ಕರ್ನಾಟಕದ ಕಡೆ ಸಾಗಿಸುತ್ತಿದ್ದಾಗ ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುಚನಾ ಸೇಠ್ ಯಾರು? ದೇಶವನ್ನು ಬೆಚ್ಚಿ ಬೀಳಿಸಿದ ಈ ‘ಮಹಾತಾಯಿ’ ತನ್ನ ಮಗುವನ್ನು ಅಷ್ಟೊಂದು ಕ್ರೂರವಾಗಿ ಹತ್ಯೆ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಎಂಥವರನ್ನೂ ಕಾಡದಿರದು. ಈ ಕುರಿತು ವಿವರ ಇಲ್ಲಿದೆ..
ಇದನ್ನೂ ಓದಿ: ಪ್ರಯಾಣಿಕರಿಗೆ ‘ಇಂಡಿಗೋ’ ಶಾಕ್..ವಿಮಾನ ಸೀಟು ಆಯ್ಕೆ ಶುಲ್ಕ ಏರಿಕೆ!
ಬೆಂಗಳೂರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ನ ದಿ ಮೈಂಡ್ಫುಲ್ ಎಐ ಲ್ಯಾಬ್ನ ಸಿಇಒ ಆಗಿರುವ ಸುಚನಾ ಸೇಠ್(39) ಎಐ ನೀತಿಶಾಸ್ತ್ರ ತಜ್ಞ ಮತ್ತು ಡೇಟಾ ವಿಜ್ಞಾನಿಯಾಗಿದ್ದು, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾಳೆ. ಈಕೆ ಬರ್ಕ್ ಮನ್ ಕ್ಲೈನ್ ಸೆಂಟರ್ ನ ಅಂಗಸಂಸ್ಥೆಯಲ್ಲಿ 2ವರ್ಷ ಕಾರ್ಯನಿರ್ವಹಿಸಿದ್ದಳು. ಅಲ್ಲಿ ಕೃತಕ ಬುದ್ಧಿಮತ್ತೆ ನಿರ್ವಹಣೆಯ ಮೌಲ್ಯಗಳಿಗೆ ಕೊಡುಗೆ ನೀಡಿದ್ದಳು. ಇದಲ್ಲದೆ ಮೆಸ್ಸಾಚುಸ್ಸೆಟ್ಸ್ ನ ಬೋಸ್ಟನ್ ನಲ್ಲಿ ಜವಾಬ್ದಾರಿಯುತ ಯಂತ್ರ ಕಲಿಕೆಯನ್ನೂ ನಡೆಸಿದ್ದಳು.
ದಿ ಮೈಂಡ್ಫುಲ್ ಎಐ ಲ್ಯಾಬ್ ಅನ್ನು ಸ್ಥಾಪಿಸುವುದಕ್ಕೂ ಮುನ್ನ ಬೆಂಗಳೂರಿನ ಬೂಮರಾಂಗ್ ಕಾಮರ್ಸ್ ಸಂಸ್ಥೆಯಲ್ಲಿ ಹಿರಿಯ ದತ್ತಾಂಶ ಎಂಜಿನಿಯರ್ ಆಗಿದ್ದಳು. ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಖಗೋಳ ಭೌತವಿಜ್ಞಾನದೊಂದಿಗೆ ಪ್ಲಾಸ್ಮಾ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸುಚನಾ ಸೇಠ್ ಪಡೆದಿದ್ದಾಳೆ.
ಸುಚನಾ ಪಶ್ಚಿಮ ಬಂಗಾಳ ಮೂಲದವಳಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸುಚನಾ ಪತಿ ಕೇರಳದವರಾಗಿದ್ದು, ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ. 2010 ರಲ್ಲಿ ವಿವಾಹವಾಗಿದ್ದು, ಅವರಿಗೆ 2019 ರಲ್ಲಿ ಗಂಡುಮಗು ಜನಿಸಿತ್ತು. 2020ರಲ್ಲಿ ತನ್ನ ಪತಿಯಿಂದ ಸುಚನಾ ಸೇಠ್ ವಿಚ್ಛೇದನ ಪಡೆದಿದ್ದಳು. ಆ ಬಳಿಕ ಪ್ರತಿ ರವಿವಾರ ತನ್ನ ಪುತ್ರನನ್ನು ನೋಡಲು ಸುಚನಾ ಸೇಠ್ ಪತಿಗೆ ಕೋರ್ಟ್ ಅನುಮತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ಪತಿಯು ತನ್ನ ಪುತ್ರನನ್ನು ಭೇಟಿಯಾಗಲು ಪ್ರಾರಂಭಿಸಿದರೆ, ಆತನ ಮೇಲೆ ಪತಿ ಹಿಡಿತ ಸಾಧಿಸಬಹುದು ಎಂದು ಸುಚನಾ ಭಯಭೀತಳಾಗಿದ್ದಳು. ಹೀಗಾಗಿ ತನ್ನ ಪುತ್ರನನ್ನು ಭೇಟಿಯಾಗಲು ಪತಿ ಬರುವುದಕ್ಕೂ ಮುಂಚಿತವಾಗಿಯೇ ಪುತ್ರನನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.