ಹೈದರಾಬಾದ್: ಕಳೆದ ಭಾನುವಾರ ಶಾಪಿಂಗ್ಗೆಂದು ಮಕ್ಕಳನ್ನು ಕರೆದುಕೊಂಡು ಡಿಮಾರ್ಟ್ಗೆ ಹೋದ ಮಹಿಳೆ, ತನಗೆ ಬೇಕಾದ ಪದಾರ್ಥಗಳನ್ನು ಖರೀದಿಸಿ ಮನೆಗೆ ಮರಳಿ ಬಂದು ನೋಡಿದಾಗ ಬಹು ದೊಡ್ಡ ಆಘಾತವೇ ಕಾದಿತ್ತು. ಬಹುಶಃ ಆಕೆ ಡಿಮಾರ್ಟ್ಗೆ ಹೋಗಿರದಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲವೇನೋ?
ಆಗಿದ್ದೇನೆಂದರೆ ಆಕೆ ಡಿಮಾರ್ಟ್ಗೆ ಹೋಗಿ ಬರುವಷ್ಟರಲ್ಲಿ ಆಕೆಯ ಪತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನದಿಶೆಟ್ಟಿ ಬಾಲಶ್ರೀಧರ್ (44) ಎಂದು ಗುರುತಿಸಲಾಗಿದೆ. ಹೈದರಾಬಾದ್ನ ಎಸ್ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವೆಂಗಾಲಾ ರಾವ್ ನಗರ ವಿಭಾಗದ ಸಿದ್ಧಾರ್ಥ್ನಗರದ ನಿವಾಸದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿರಿ: ಶಿವಮೊಗ್ಗ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ: ಚಿಕ್ಕಬಳ್ಳಾಪುರದಲ್ಲಿ ಗಣಿಸ್ಫೋಟಕ್ಕೆ ಐವರು ಬಲಿ
ಮೃತ ಬಾಲಶ್ರೀಧರ್ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸಟ್ಟನಾಪಲ್ಲಿ ಮಂಡಲದ ಪಾಪಿರೆಡ್ಡಿಪಲ್ಲೆಯ ನಿವಾಸಿ. ಈತ ಹೈದರಾಬಾದ್ನ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಬಾಲಶ್ರೀಧರ್ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಾಲ ನೀಡಿದ್ದ. ಅದಕ್ಕಾಗಿ ಬೇರೆಯವರ ಬಳಿ ಹಣ ಪಡೆದಿದ್ದ. ಆದರೆ, ಹಣವನ್ನು ಮರಳಿಸಲು ಕೇಳಿದಾಗ ಸತಾಯಿಸುತ್ತಿದ್ದರು. ಇತ್ತ ಹಣ ಕೊಟ್ಟವರು ಬಾಲಶ್ರೀಧರ್ನನ್ನು ಒತ್ತಾಯಿಸುತ್ತಿದ್ದರು. ಯಾರು ಹಣ ಕೊಡದಿದ್ದಾಗ ಮಾನಸಿಕವಾಗಿ ಕುಗ್ಗಿದ್ದ. ಹಿಂದೊಮ್ಮೆ ಆತ್ಮಹತ್ಯೆಗೂ ಯತ್ನಿಸಿ, ಹೇಗೋ ಬಚಾವ್ ಆಗಿದ್ದ.
ಮಾನಸಿಕ ಖಿನ್ನತೆ ಮಾತ್ರ ಹಾಗೆಯೇ ಉಳಿದಿತ್ತು. ಹೀಗಿರುವಾಗ ಭಾನುವಾರ (ಫೆ.21) ಬೆಳಗ್ಗೆ ಬಾಲಶ್ರೀಧರ್ ಪತ್ನಿ ಪದ್ಮಾ ಶಾಪಿಂಗ್ಗೆಂದು ಮಕ್ಕಳನ್ನು ಕರೆದುಕೊಂಡು ಡಿಮಾರ್ಟ್ಗೆ ತೆರಳಿದ್ದಾಳೆ. ಇತ್ತ ಮನೆಲ್ಲಿ ಒಬ್ಬನೇ ಇದ್ದ ಬಾಲಶ್ರೀಧರ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ಡಿಮಾರ್ಟ್ನಿಂದ ಮನೆಗೆ ಮರಳಿದ ಪತ್ನಿ ಮನೆಯೊಳಗೆ ಪ್ರವೇಶಿಸಿದಾಗ ಒಳಗಡೆ ಪತಿಯ ಮೃತದೇಹ ಫ್ಯಾನ್ನಲ್ಲಿ ನೇತಾಡುವುದನ್ನು ನೋಡಿ ಕುಸಿದುಬಿದ್ದಿದ್ದಾಳೆ. ಗಂಡನ ಕಳೆದುಕೊಂಡ ಆಕೆಯ ಆಕ್ರಂದನವು ಸಹ ಮುಗಿಲು ಮುಟ್ಟಿತ್ತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ