ಮೆಲ್ಬೋರ್ನ್: ಪಾಕಿಸ್ತಾನ ವಿರುದ್ಧದ ಮೊದಲ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಅಭೂತಪೂರ್ವ ಜಯ ದಾಖಲಿಸಿತು. ಆರಂಭದಲ್ಲಿಯೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಾ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ಮೂಲಕ ಜಯ ದಾಖಲಿಸಿತು.
ರಕ್ಷಣಾತ್ಮಕವಾಗಿ ಇನ್ನಿಂಗ್ಸ್ ಕಟ್ಟುತ್ತಾ ಹೋದ ವಿರಾಟ್ ಕೊಹ್ಲಿಗೆ, ಹಾರ್ದಿಕ್ ಪಾಂಡ್ಯಾ ಸಾಥ್ ನೀಡಿದರು. ಒಂದು ಹಂತದಲ್ಲಿ ಪಾಂಡ್ಯಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೊನೆಯ ಓವರ್ನಲ್ಲಿ ಎಡವಿದ ಪಾಂಡ್ಯಾ 40 ರನ್ ಗಳಿಸಿ ಔಟ್ ಆಗಿದ್ದರು. ಆದರೆ ಪಾಂಡ್ಯಾ ವಿಕೆಟ್ ಕಾಯ್ದುಕೊಂಡು ಗಳಿಸಿದ 40 ರನ್ ಪಂದ್ಯದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯಾ, ತಮ್ಮ ತಂದೆಯನ್ನು ನೆನೆದು ಭಾವುಕರಾದರು. ಮಾತನಾಡುತ್ತಾ ನನಗೆ ಈ ಪಂದ್ಯ ಆಡುವ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಸಲಹೆ ಪಡೆದುಕೊಂಡೆ. ಅವರು ನನಗೆ ಅತ್ಯತ್ತುಮ ರೀತಿಯಲ್ಲಿ ಮಾರ್ಗದರ್ಶನ ನೀಡಿ ಧೈರ್ಯ ತುಂಬಿದರು.
ಮೈದಾನದಲ್ಲಿದ್ದಾಗ ಅತೀವ ಒತ್ತಡ ಇತ್ತು. ಹೀಗಾಗಿ ಇಂತಹ ಪಂದ್ಯದಲ್ಲಿ ಒತ್ತಡ ನಿರ್ವಹಿಸುವುದು ಕೂಡ ಮುಖ್ಯವಾಗುತ್ತದೆ. ಕೋಚ್ ದ್ರಾವಿಡ್ ಸ್ಪೂರ್ತಿ ತುಂಬಿದರು. ಒತ್ತಡಕ್ಕೆ ಒಳಗಾಗಬೇಡಿ. ಒತ್ತಡ ರಹಿತವಾಗಿ ಆಟವಾಡಿ ಎಂದು ಹೇಳಿದರು. ಮೈದಾನದಲ್ಲಿನ ನಮ್ಮ ತಂಡದ ನಿರ್ವಹಣೆಯಿಂದ ಕ್ರಿಕೆಟ್ ಅಭಿಮಾನಿಗಳು ಖುಷಿಯಾಗಿದ್ದಾರೆ ಎಂದು ಪಾಂಡ್ಯಾ ಹೇಳಿಕೊಂಡಿದ್ದಾರೆ.