ನವದೆಹಲಿ : ಕರ್ನಾಟಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಿ ಹೊಸ ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಲಿದೆ ಎಂಬ ವಿಚಾರ ಸುದ್ದಿ ಮಾಡಿದೆ. ರಾಷ್ಟ್ರೀಯ ನಾಯಕರ ಸಂದೇಶ ಜುಲೈ 25 ರಂದು ಬರುತ್ತದೆ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿದ್ದಾರೆ. ಹೀಗಿರುವಾಗ, ನೂತನವಾಗಿ ಕೇಂದ್ರ ಸಚಿವರಾಗಿರುವ ಸಂಸದ ಪ್ರಹ್ಲಾದ್ ಜೋಶಿ ಅವರು ಹೊಸ ಸಿಎಂ ಆಗಬಹುದೆಂಬ ಊಹೆಗಳು ಹುಟ್ಟಿವೆ.
ಈ ಬಗ್ಗೆ ಪ್ರಹ್ಲಾದ್ ಜೋಶಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಈ ಬಗ್ಗೆ ತಮ್ಮೊಂದಿಗೆ ಯಾರೂ ಮಾತನಾಡಿಲ್ಲ. ಬಿಎಸ್ವೈರನ್ನು ರಾಜೀನಾಮೆ ನೀಡಲು ಕೇಳಿದ್ದಾರೋ ಇಲ್ಲವೋ ಎಂಬ ಬಗ್ಗೆಯೂ ತಮಗೆ ಗೊತ್ತಿಲ್ಲ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: 2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್ವೈ
“ಬಿಜೆಪಿಯಲ್ಲಿ ಹೈಕಮ್ಯಾಂಡ್ ಇಲ್ಲ, ರಾಷ್ಟ್ರೀಯ ನಾಯಕತ್ವ ಇದೆ ಅಷ್ಟೆ. ಕಾಲದಿಂದ ಕಾಲಕ್ಕೆ ಬೇರೆ ಬೇರೆ ನಾಯಕತ್ವ ಇದೆ. ರಾಜನಾಥ್ ಸಿಂಗ್ ಅವರಿದ್ದರು, ನಂತರ ನಿತಿನ್ ಗಡ್ಕರಿ ಬಂದರು. ಅವರ ನಂತರ ಅಮಿತ್ ಷಾ ನಾಯಕತ್ವ ವಹಿಸಿಕೊಂಡರೆ, ಈಗ ಜೆ.ಪಿ.ನಡ್ಡಾ ಇದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ವರಿಷ್ಠ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಇದ್ದಾರೆ. ಅವರು ನಿರ್ಧರಿಸುತ್ತಾರೆ” ಎಂದು ಜೋಶಿ ಹೇಳಿದ್ದಾರೆ.
ಯಡಿಯೂರಪ್ಪ ಸ್ಥಾನವನ್ನು ನೀವು ಪಡೆಯಬಹುದು ಎನ್ನುವುದರ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ “ಆ ಬಗ್ಗೆ ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಮಾಧ್ಯಮದವರು ಮಾತ್ರ ಅದನ್ನು ಚರ್ಚಿಸುತ್ತಿದ್ದಾರೆ. ನನ್ನೊಂದಿಗೆ ಯಾರೂ ಮಾತಾಡಿಲ್ಲವಾದ್ದರಿಂದ, ಅದಕ್ಕೆ ನಾನು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ” ಎಂದು ಜೋಶಿ ಉತ್ತರಿಸಿದ್ದಾರೆ ಎಂದು ವರದಿ ಹೇಳಿದೆ. (ಏಜೆನ್ಸೀಸ್)
ಮತ್ತಷ್ಟು ಅನ್ಲಾಕ್: ಪೂಜಾ ಚಟುವಟಿಕೆಗಳಿಗೆ ಅನುಮತಿ; ಮನೋರಂಜನಾ ಉದ್ಯಾನಗಳಿಗೆ ಅವಕಾಶ