More

    ಸಚ್ಚೇರಿಪೇಟೆ ಅಣೆಕಟ್ಟು ಮುಳುಗಡೆ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್ 
    ಸಚ್ಚೇರಿಪೇಟೆ ನಲ್ಲೆಗುತ್ತು ಬಳಿ ನೂತನವಾಗಿ ನಿರ್ಮಿಸಲಾದ ಅಣೆಕಟ್ಟಿಗೆ ಹಲಗೆ ಹಾಕಿ ನೀರು ಸಂಗ್ರಹಿಸಿದ್ದು, ಜನರ ಓಡಾಟಕ್ಕಿದ್ದ ಹಳೆಯ ಸೇತುವೆ ನೀರಿನ ಮಟ್ಟ ಹೆಚ್ಚಳವಾಗಿ ಶುಕ್ರವಾರ ಮುಳುಗಡೆಗೊಂಡಿತು. ಇದರಿಂದ ಶಾಲಾ ಮಕ್ಕಳು, ಸಾರ್ವಜನಿಕರು ನದಿ ನೀರಿನಲ್ಲೇ ಅಪಾಯಕಾರಿಯಾಗಿ ಸಂಚರಿಸಬೇಕಾಯಿತು.

    ನಲ್ಲೆಗುತ್ತು ಬಳಿ ನೂತನ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣವಾದರೂ ಸೇತುವೆಯ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗುತ್ತಿಗೆದಾರರು ನಿರ್ಮಿಸದ ಕಾರಣ ಹಳೆಯ ಸೇತುವೆ ಮುಳುಗಿದ್ದು ಸಾರ್ವಜನಿಕರು ನೀರಿನಲ್ಲೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು.
    ಹೊಸ ಸೇತುವೆಯ ಅಣೆಕಟ್ಟಿಗೆ ಹಲಗೆ ಹಾಕಿದ ಬಳಿ ಹಳೆಯ ಅಣೆಕಟ್ಟಿನ ಸೇತುವೆ ಹಲವು ಬಾರಿ ಮುಳುಗಡೆಯಾಗಿದ್ದು, ಸಮೀಪದ ಕೃಷಿ ಭೂಮಿ ಜಲಾವೃತವಾಗಿತ್ತು. ಆ ಬಳಿಕ ಸ್ಥಳೀಯರು ಒಂದು ಕಿಂಡಿ ತೆರವು ಮಾಡಿ ನೀರು ಹರಿಯಲು ವ್ಯವಸ್ಥೆ ಕಲ್ಪಿಸಿದ್ದರು. ಪ್ರಸಕ್ತ ಮೇಲ್ಭಾಗದ ಬೋಳ ಪಾಲಿಂಗೇರಿಯ ಅಣೆಕಟ್ಟಿನ ಹಲಗೆ ತೆರವು ಮಾಡಿರುವ ಪರಿಣಾಮ ಏಕಾಏಕಿ ನೀರಿನ ಮಟ್ಟ ಹೆಚ್ಚಳವಾಗಿ ನಲ್ಲೆಗುತ್ತು ಹಳೆಯ ಅಣೆಕಟ್ಟಿನ ಸೇತುವೆ ಸಂಪೂರ್ಣ ಮುಳುಗಡೆಯಾಗಿ ರಸ್ತೆಯುದ್ದಕ್ಕೂ ನೀರು ಆವರಿಸಿದೆ. ಇದರಿಂದ ಬೋಳ, ಕಡಂದಲೆ ಹಾಗೂ ಸಚ್ಚೇರಿಪೇಟೆ ಭಾಗದ ಜನ ತೊಂದರೆಗೊಳಗಾದರು.

     ನಡುರಸ್ತೆಯಲ್ಲೇ ಉಳಿದ ವಿದ್ಯಾರ್ಥಿಗಳು: ಹಳೇ ಅಣೆಕಟ್ಟಿನ ಮೇಲೆ ರಸ್ತೆಗೆ ನೀರು ಆವರಿಸಿದ ಪರಿಣಾಮ ಶಾಲೆ ಬಿಟ್ಟು ಮನೆಗೆ ತೆರಳಬೇಕಾದ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ಉಳಿಯಬೇಕಾಯಿತು. ನದಿಯ ನೀರು ಅಣೆಕಟ್ಟಿನಿಂದ ಮೇಲ್ಮಟ್ಟದಲ್ಲಿ ಹರಿಯುತ್ತಿದ್ದುದರಿಂದ ಶಾಲಾ ವಾಹನಗಳ ಸಂಚಾರ ಕಷ್ಟವಾಗಿತ್ತು. ಒಂದಿಷ್ಟು ವಾಹನಗಳು ನೀರಿನ ನಡುವೆ ಸಾಹಸ ಮಾಡಿಕೊಂಡು ರಸ್ತೆ ದಾಟಿದರೆ ಶಾಲಾ ಮಕ್ಕಳನ್ನು ಹೊತ್ತು ತಂಡ ವಾಹನಗಳು ರಸ್ತೆಯಲ್ಲೇ ಉಳಿಯುವಂತಾಯಿತು. ಬಳಿಕ ವಿದ್ಯಾರ್ಥಿಗಳನ್ನು ಸ್ಥಳೀಯರು ನೀರಿನ ನಡುವೆ ದಡ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಕೆಲ ವಾಹನ ಸವಾರರು ನೀರಿನ ಮಟ್ಟ ಕಡಿಮೆಯಾಗುವವರೆಗೂ ಕಾದು ಮತ್ತೆ ಮುಂದುವರಿದರು.

    ರಸ್ತೆ ಸಂಪರ್ಕ ಕಲ್ಪಿಸಲು ಒತ್ತಾಯ: ಹಳೆಯ ಅಣೆಕಟ್ಟಿನ ಪಕ್ಕದಲ್ಲೇ ನೂನ ಸೇತುವೆಯನ್ನು ನಿರ್ಮಿಸಿದ್ದರೂ ಅದಕ್ಕೆ ಸಂಪರ್ಕ ರಸ್ತೆ ಕಲ್ಪಿಸಿಲ್ಲ. ಹೀಗಾಗಿ ಅಪಾಯಕಾರಿಯಾಗಿರುವ ಹಳೇ ಸೇತುವೆಯನ್ನೇ ಅವಲಂಬಿಸಬೇಕಾಗು. ಹೊಸ ಸೇತುವೆಯ ರಸ್ತೆ ಸಂಪರ್ಕಕ್ಕೆ ಮಣ್ಣಿನ ರಾಶಿ ತಂದು ಹಾಕಿದರೂ ಸಂಪರ್ಕ ಕಲ್ಪಿಸಿಲ್ಲ. ಹೀಗೆ ನದಿಯ ನೀರಿನ ನಡುವೆ ಸಂಚರಿಸುವುದು ಅಪಾಯಕಾರಿ. ಕೂಡಲೇ ಹೊಸ ಸೇತುವೆಗೆ ರಸ್ತೆಯ ಸಂಪರ್ಕವನ್ನು ಕಲ್ಪಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

     ಸಚ್ಚೇರಿಪೇಟೆ ನಲ್ಲೆಗುತ್ತು ಬಳಿ ನೂತನವಾಗಿ ನಿರ್ಮಿಸಲಾದ ಅಣೆಕಟ್ಟಿಗೆ ಶೀಘ್ರ ಸಂಪರ್ಕ ರಸ್ತೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತನಾಡುತ್ತೇನೆ.
    ರೇಷ್ಮಾ ಉದಯ್ ಶೆಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯೆ

     ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಯಾವುದೇ ತಡೆಗೋಡೆ ಇಲ್ಲದ ಅಣೆಕಟ್ಟಿನ ಮೇಲೆ ಮಕ್ಕಳು ಸಾಗಬೇಕಾಗಿದೆ. ಏನಾದರೂ ಅಪಾಯ ಸಂಭವಿಸಿದರೇ ಇದಕ್ಕೆ ಯಾರು ಹೊಣೆ?
    ಸುಮತಿ ದೇವಾಡಿಗ
    ಸ್ಥಳೀಯ ನಿವಾಸಿ

    ಹೊಸ ಸೇತುವೆ ನಿರ್ಮಾಣವಾದರೂ ಇನ್ನೂ ಸಂಪರ್ಕ ಆಗಿಲ್ಲ. ಹಳೇಯ ಸೇತುವೆ ನೀರಿನ ಮಟ್ಟ ಹೆಚ್ಚಾಗಿ ಮುಳುಗಡೆಯಾಗುತ್ತಿದೆ ಹೀಗಿರುವಾಗ ನಾವು ಎಲ್ಲಿಂದ ಸಂಚಾರ ನಡೆಸಬೇಕು.
    ದಿನೇಶ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts