ಡಾ. ಕೆ.ವಿ. ಕಾಮತ್ ಮೆಚ್ಚುಗೆ — ಡಾ.ಟಿಎಂಎ ಪೈ 126ನೇ ಜನ್ಮದಿನ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಉಡುಪಿ
ಆರೋಗ್ಯ, ಬ್ಯಾಂಕಿಂಗ್ ಹಾಗೂ ಶಿಕ್ಷಣ ಸೌಲಭ್ಯದ ಮೂಲಕ ಭಾರತದ ಭವಿಷ್ಯ ಭದ್ರವಾಗಿರಲು ಡಾ. ಟಿಎಂಎ ಪೈ ಹಾಗೂ ಅವರ ಕುಟುಂಬ ಮಹತ್ವದ ಕೊಡುಗೆ ನೀಡಿದ್ದು, ಪುಟ್ಟ ಹಳ್ಳಿಯಾದ ಮಣಿಪಾಲವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ಎನ್ಎಬಿಎಫ್ಐಡಿ ಹಾಗೂ ಜಿಯೋ ಫೈನಾನ್ಶಿಯಲ್ ಸರ್ವಿಸಸ್ನ ಅಧ್ಯಕ್ಷ ಡಾ. ಕೆ.ವಿ. ಕಾಮತ್ ಹೇಳಿದರು.
ಮಣಿಪಾಲದ ವ್ಯಾಲಿ ವ್ಯೂನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಟಿಎಂಎ ಪೈ ಅವರ 126ನೇ ಜನ್ಮದಿನದ ಪ್ರಯುಕ್ತ ನಡೆದ ಸಂಸ್ಥಾಪಕರ ದಿನಾಚಾರಣೆಯಲ್ಲಿ ಡಾ.ಪೈ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪಿಗ್ಮಿ ಸಂಗ್ರಹ ಮಾದರಿ ಕಾರ್ಯ
ಡಾ. ಟಿಎಂಎ ಪೈ ಅವರ ಗುರಿ, ಸಂಕಲ್ಪ ಏನಿತ್ತು ಎನ್ನುವದನ್ನು ನಾವೀಗ ಮಣಿಪಾಲದಲ್ಲಿ ನೋಡಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಪೈ ಕುಟುಂಬ ಕ್ರಾಂತಿಯನ್ನೇ ಮಾಡಿದೆ. ಗ್ರಾಮೀಣ ಜನರಿಗೆ ಸಾಲ ಸೌಲಭ್ಯ ನೀಡಿದ್ದಲ್ಲದೆ, ಬಡವರಿಗೆ ಆರ್ಥಿಕ ಸ್ವಾವಲಂಬನೆ ಲಭಿಸುವಂತಾಗಲು ಪಿಗ್ಮಿ ಸಂಗ್ರಹ ಕಾರ್ಯ ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೇ ಮಾದರಿಯಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ. ಟಿಎಂಎ ಪೈ ಅವರ ಸಾಧನೆ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಆರು ವಿದ್ಯಾರ್ಥಿಗಳಿಗೆ ಕುಂದಾಪುರ ಮೋಹನ್ ಮತ್ತು ಲತಾ ಭಂಡಾರ್ಕರ್ ಸ್ಕಾಲರ್ಶಿಪ್ ಹಾಗೂ ಸಾಧಕರಿಗೆ ಶ್ರೀಮತಿ ಶಾರದಾ ಎಂ. ಪೈ-ಡಾ ಪದ್ಮಾ ರಾವ್ ಸ್ಮಾರಕ ಪ್ರಶಸ್ತಿ, ಶ್ರೀಮತಿ ಶಾರದಾ ಎಂ. ಪೈ-ಡಾ ಪದ್ಮಾ ರಾವ್ ಎ-ಎಂಎಂಎಸ್ ವಜ್ರಮಹೋತ್ಸವ ಪ್ರಶಸ್ತಿ, ಶ್ರೀಮತಿ ಗೀತಾ ಕೆ. ನಾಯಕ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಿ. ಸತೀಶ್ ಪೈ, ಟಿ. ಅಶೋಕ ಪೈ, ಡಾ.ರಂಜನ್ ಆರ್. ಪೈ, ವಾಸಂತಿ ಪೈ ಉಪಸ್ಥಿತರಿದ್ದರು. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಿರಿಧರ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಪ್ರವೀಣ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.