ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ ವಿಚಾರಕ್ಕೆ ಸಂಬಂಧಪಟ್ಟು ವಿವಾದ ಸೃಷ್ಟಿಸಿದ್ದಾರೆ.
ಲಡಾಖ್ ಗಡಿಯಲ್ಲಿ ಚೀನಾ ಭಾರತದ ನೆಲವನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದಕ್ಕೆ ಲಡಾಖ್ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದರು. ಈಗ ಲಡಾಖ್ನಲ್ಲಿ ಒಂದು ಸಣ್ಣ ಭೂಮಿಯೂ ಚೀನಾದ ಪಾಲಾಗಲಿಲ್ಲ ಎಂದು ಟ್ವೀಟ್ ಮಾಡಿದ್ದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಚೀನಾ ಭಾರತದ ನೆಲವನ್ನು ಅತಿಕ್ರಮಣ ಮಾಡಿರುವ ಬಗ್ಗೆ ದಾಖಲೆಯನ್ನೂ ತೋರಿಸಿದ್ದರು. ಇದನ್ನೂ ಓದಿ: ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್ ಪ್ರಧಾನಿ!
ಇದರ ಬೆನ್ನಲ್ಲೇ ಭಾರತ ಸಶಸ್ತ್ರಪಡೆಯ ಸುಮಾರು 71 ಹಿರಿಯ ಅಧಿಕಾರಿಗಳು ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ವಿಶ್ವದಲ್ಲೇ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಮ್ಮ ದೇಶದ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಅಂಥ ಯೋಧರ ಕೆಲಸದ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ ಹೀಗೆ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು 1962ರಲ್ಲಿ ಏನಾಯಿತು ಎಂಬುದನ್ನು ಮರೆಯಬಾರದು. ಆಗ ಅವರ ಮುತ್ತಜ್ಜ ಜವಾಹರ್ ಲಾಲ್ ನೆಹರೂ ಅವರೇ ದೇಶವನ್ನು ಆಳುತ್ತಿದ್ದರು. ಆಗ ನಾವು ಅಂದರೆ ಭಾರತೀಯ ಸೈನಿಕರು ಚೀನಾ ವಿರುದ್ಧ ವೀರಾವೇಶದಿಂದ ಹೋರಾಡಿ, ಆದೇಶದಲ್ಲಿ ಅಪಾರ ಸಾವು-ನೋವು ಉಂಟು ಮಾಡಿದರೂ ಕೂಡ ಕೊನೆಗೂ ಸೋತಿದ್ದೇವೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕರೊನಾ: ಪೊಲೀಸ್, ವೈದ್ಯ, ಜಡ್ಜ್ಗೂ ಕ್ವಾರಂಟೈನ್ ಸಂಕಷ್ಟ
ರಾಹುಲ್ ಗಾಂಧಿ ತಮ್ಮ ದೇಶದ ವಿರುದ್ಧವೇ ಇಂತಹ ಹೇಳಿಕೆ ನೀಡುತ್ತಾರೆಂದು ವಿವೇಕಶಾಲಿಯಾದ ಯಾವ ಭಾರತೀಯನೂ ನಿರೀಕ್ಷೆ ಮಾಡಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, 2017ರಲ್ಲಿ ಡೊಕ್ಲಾಮ್ನಲ್ಲಿ ಏನಾಯಿತು ಎಂಬ ಬಗ್ಗೆಯೂ ವಿವರಣೆ ನೀಡಿದ್ದಾರೆ.
ಮಿಲಿಟರಿಯಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ತಮ್ಮ ಕ್ಷುಲ್ಲಕ ರಾಜಕಾರಣಕ್ಕಾಗಿ ತಿರುಚುವುದು ತುಂಬ ಶೋಚನೀಯ ಸಂಗತಿ. ಇದರಿಂದ ನಮಗೆ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)