ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಜಿಪಂ, ತಾಪಂ, ಬಳ್ಳಾರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಸ್ಪಂದನ ಸಂಸ್ಥೆ ಆಶ್ರಯದಲ್ಲಿ ಗುರುವಾರ ಜಲಜೀವನ್ ಮಿಷನ್, ಸ್ವಚ್ಛ ಭಾರತ ಮಿಷನ್ ಯೋಜನೆ, ಮಳೆ ನೀರು ಕೊಯ್ಲು, ಬೂದು ನೀರು ನಿರ್ವಹಣೆ, ಸ್ವಚ್ಛ ಸಂಕೀರ್ಣ ಘಟಕ, ಬಯಲುಮುಕ್ತ ಬಹಿರ್ದೆಸೆ ಗ್ರಾಮ, ಕಾರ್ಯಾತ್ಮಕ ನಳ ಸಂಪರ್ಕ, ನೀರಿನ ಗುಣಮಟ್ಟ ಪರೀಕ್ಷೆ ಬಗ್ಗೆ ವಸ್ತು ಪ್ರದರ್ಶನ ಜರುಗಿತು.
ಜಲಜೀವನ್ ಮಿಷನ್ ಯೋಜನೆಯ ಅನುಷ್ಟಾನ ಬೆಂಬಲ ಸಂಸ್ಥೆಯ ತಂಡದ ನಾಯಕ ಎ.ಕೊಟ್ರೇಶ್ ಮಾತನಾಡಿ, ಪ್ರತಿನಿತ್ಯ ಪ್ರತಿ ವ್ಯಕ್ತಿಗೆ 55 ಲೀ. ಸುರಕ್ಷಿತ ಶುದ್ಧ ಕುಡಿವ ನೀರನ್ನು ಒದಗಿಸಲಾಗುವುದು. 2024ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಕ್ಕೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸಿ, ಶುದ್ಧ ನೀರನ್ನು ಪೂರೈಸಲಾಗುವುದು ಎಂದರು.
ಮೆಟ್ರಿ ಗ್ರಾಪಂ ಪಿಡಿಒ ಶ್ರೀಶೈಲಗೌಡ ಮಾತನಾಡಿ, ನೀರು ಅಮೂಲ್ಯವಾಗಿದ್ದು ವ್ಯರ್ಥ ಮಾಡಬಾರದು. ಅಂತರ್ಜಲ ಹೆಚ್ಚಿಸುವ, ನೀರಿನ ಮೂಲಗಳನ್ನು ಸಂರಕ್ಷಿಸುವಲ್ಲಿ ಜನತೆ ಸರ್ಕಾರದ ಯೋಜನೆಗಳೊಂದಿಗೆ ಕೈಜೋಡಿಸಬೇಕು. ವೈಯಕ್ತಿಕ ಶೌಚಗೃಹ, ಇಂಗುಗುಂಡಿ ನಿರ್ಮಿಸಿಕೊಳ್ಳುವಲ್ಲಿ ಪ್ರತಿ ಕುಟುಂಬ ಹಿತಾಸಕ್ತಿ ತೋರಬೇಕೆಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ತಿಮ್ಮಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ತಿಮ್ಮಪ್ಪ ಹುಡೇದ, ನಾಗರತ್ನಾ, ಹೊನ್ನೂರಮ್ಮ, ನಾಗಮ್ಮ, ಕಾರ್ಯದರ್ಶಿ ಎಚ್.ಹುಲುಗಪ್ಪ, ಐಎಸ್ಆರ್ಎ ಸಿಬ್ಬಂದಿ ಎಚ್.ಮಂಜುಳಾ ತಿಮ್ಮಪ್ಪ, ಬಸವರಾಜ್, ಶರಣಪ್ಪ ಇತರರಿದ್ದರು.