More

    ಚಕ್ರವರ್ತಿ ಸೂಲಿಬೆಲೆ ಅಂಕಣ, ವಿಶ್ವಗುರು; ಕಾಶ್ಮೀರಿ ಪಂಡಿತರ ರೋದನ ಕಾಣಿಸದೇ…? 

    ಕಾಶ್ಮೀರದಲ್ಲಿ 90ರ ದಶಕದ ಮೊದಲ ರಕ್ತ ಹೀರಿದ್ದು ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್​ನವರೇ. ಮುಸಲ್ಮಾನರ ನಡುವೆ ಸಾಕಷ್ಟು ಖ್ಯಾತವಾಗಿದ್ದ ಮತ್ತು ಅವರ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದ ವಕೀಲರೂ ಆಗಿದ್ದ ಟೀಕಾಲಾಲ್ ಟಪ್ಲು ಆ ಮೊದಲ ಬಲಿಯಾಗಿಬಿಟ್ಟರು. ಅವರದ್ದು ಒಂದೇ ತಪ್ಪು, ಅವರು ಹಿಂದೂವಾಗಿದ್ದರು ಎನ್ನುವುದು ಅಷ್ಟೇ!

    ಚಕ್ರವರ್ತಿ ಸೂಲಿಬೆಲೆ ಅಂಕಣ, ವಿಶ್ವಗುರು; ಕಾಶ್ಮೀರಿ ಪಂಡಿತರ ರೋದನ ಕಾಣಿಸದೇ...? ದೆಹಲಿಯ ಚುನಾವಣೆಗಳು ಮುಗಿದಿವೆ. ಶಹೀನ್​ಬಾಗ್ ಸದ್ದು ಬಹುಶಃ ಇನ್ನು ಮುಂದೆ ಕೇಳಲಾರದು. ಈ ಲೇಖನ ಓದುವ ವೇಳೆಗೆ ಅಲ್ಲಿನ ಪ್ರತಿಭಟನೆ ಸೂತ್ರಧಾರ ಅರವಿಂದ ಕೇಜ್ರಿವಾಲರಿಗೆ ಲಾಭವಾಗಲಿದೆಯೋ ಅಥವಾ ನಷ್ಟ ತಂದುಕೊಡಲಿದೆಯೋ ಎಂಬುದು ಖಂಡಿತ ಅರಿವಾಗಲಿದೆ. ಆದರೆ ಒಂದಂತೂ ಸತ್ಯ. ಮುಸಲ್ಮಾನರು ಒಗ್ಗೂಡಲು ಇದೊಂದು ಸೂಕ್ತ ವೇದಿಕೆ ನಿರ್ಮಾಣ ಮಾಡಿಕೊಟ್ಟಿತು. ಇದು ಒತ್ತಟ್ಟಿಗೆ ಇರಲಿ.

    ಭಾರತದಲ್ಲಿ ಅಥವಾ ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ ಮತಾಂಧರು ಒಗ್ಗೂಡಿದರೆಂದರೆ ಉಳಿದವರ ಬದುಕು ಸುಲಭವಿಲ್ಲವೆಂದೇ ಅರ್ಥ. ಇದಕ್ಕೆ ಕಾಶ್ಮೀರದ ಪಂಡಿತರ ಪಲಾಯನವೇ ಸಾಕ್ಷಿ!

    ಹೌದು, ಅದೂ ಕೂಡ ರ್ಚಚಿಸಬೇಕಾದ ವಿಷಯವೇ. ವಿದುವಿನೋದ್ ಚೋಪ್ರಾ ನಿರ್ದೇಶನದ ‘ಶಿಕಾರ್’ ಸಿನಿಮಾ ತೆರೆಕಂಡಿತು. ಕಾಶ್ಮೀರಿ ಪಂಡಿತರ ಭಯವೆನ್ನಿಸುವ ಪರಿಸ್ಥಿತಿ ಕುರಿತಂತೆ ಈ ಚಿತ್ರವೆಂದು ಸಾಕಷ್ಟು ಪ್ರಚಾರ ಮಾಡಲಾಗಿತ್ತಾದರೂ ಚಿತ್ರ ಮತಾಂಧರ ವಿಧ್ವಂಸಕ ಕೃತ್ಯಗಳನ್ನು ಮುಚ್ಚಿಟ್ಟು ಪಂಡಿತರನ್ನೇ ತಪ್ಪಿತಸ್ಥರನ್ನಾಗಿಸುವ ಚಿತ್ರಕಥೆ ಹೊಂದಿದೆ ಎಂದು ಅನೇಕರು ಆರೋಪಿಸಿದ್ದಾರೆ. ಪ್ರೀಮಿಯರ್ ಶೋನಲ್ಲೇ ಕೆಲವರು ನಿರ್ದೇಶಕರನ್ನು ಟೀಕಿಸಿದ್ದು ವೈರಲ್ ಆಗಿದೆ. ಈ ಎಲ್ಲ ವಿಚಾರಗಳಿಗೂ ಪ್ರತಿಕ್ರಿಯಿಸುತ್ತ ಚಿತ್ರದ ನಿರ್ದೇಶಕರು ‘ಎಂದೋ ಆಗಿದ್ದನ್ನು ಮತ್ತೆ ಮತ್ತೆ ಕೆದುಕುವುದರಲ್ಲಿ ಅರ್ಥವೇನಿದೆ? ಎಲ್ಲವನ್ನೂ ಮರೆತು ಹೊಸ ಬದುಕು ನಡೆಸಬೇಕು’ ಎಂದಿದ್ದಾರೆ.

    ಅನೇಕ ಎಡಪಂಥೀಯ ಬುದ್ಧಿಜೀವಿಗಳು ಇದೇ ಮಾತನ್ನು ಪುನರುಚ್ಚರಿಸುತ್ತ ಮುಸಲ್ಮಾನರ ಪರವಾಗಿ ವಾದ ಮಂಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಖಂಡಿತ ಒಪ್ಪತಕ್ಕದ್ದೇ. ಆದರೆ ಇದೇ ವಾದವನ್ನು ಸ್ವಲ್ಪ ವಿಸ್ತಾರ ಮಾಡಿ ಮೇಲ್ವರ್ಗದ ಜನ ದಲಿತರ ಮೇಲೆ ಕೆಲವಾರು ದಶಕಗಳ ಹಿಂದೆ ಅತ್ಯಾಚಾರಗೈದರಲ್ಲ, ಈಗ ಕಾಲಘಟ್ಟ ಬಹಳ ಬದಲಾಗಿದೆ. ಆ ಮೇಲ್ವರ್ಗದವರ ಇಂದಿನ ಪೀಳಿಗೆಗಳು ಇಂದು ಪಶ್ಚಾತ್ತಾಪ ಪಟ್ಟು ಎಲ್ಲರನ್ನೂ ಅಪ್ಪಿಕೊಳ್ಳಲು ಮುಂದಾಗಿರುವಾಗ ಹಳೆಯದನ್ನು ಮರೆತುಬಿಡಬೇಕಲ್ಲ ಎಂಬ ಇವರದ್ದೇ ವಾದವನ್ನು ಮತ್ತೊಮ್ಮೆ ಉಚ್ಚರಿಸಿದರೆ ಉರಕೊಂಡು ಬೀಳುತ್ತಾರೆ.

    ಹಾಗೆ ನೋಡಿದರೆ ಭಾರತದಲ್ಲಿರುವ ಮೇಲ್ವರ್ಗದ ಜನರಲ್ಲನೇಕರು ಪಶ್ಚಾತ್ತಾಪ ಪಟ್ಟು ತಮ್ಮ ಹಿರಿಯರು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಕೈಚಾಚಿ ನಿಂತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್​ರಿಗೆ ನಾಸಿಕ್​ನ ಕಾಳಾರಾಮ್ ದೇವಸ್ಥಾನಕ್ಕೆ ಪ್ರವೇಶ ಕೊಡದಿದ್ದ ತಪ್ಪಿಗೆ ಆ ಮನೆತನದ ಇಂದಿನ ಅರ್ಚಕರು ತಾವೇ ಮುಂದೆ ನಿಂತು ದಲಿತರನ್ನು ಬರಮಾಡಿಕೊಂಡ ಉದಾಹರಣೆ ಕಣ್ಣೆದುರಿಗೇ ಇದೆಯಲ್ಲ? ಇದಕ್ಕೆ ಪ್ರತಿಯಾಗಿ ಇದುವರೆಗೂ ಸಜ್ಜನ ಮುಸಲ್ಮಾನರೆನಿಸಿಕೊಂಡವರು ಕಾಶ್ಮೀರದ ಪಂಡಿತರಿಗೆ ಆದದ್ದು ಅನ್ಯಾಯ ಎಂದದ್ದನ್ನು ಕೇಳಿದ್ದೀರಾ?

    ಔರಂಗಜೇಬ್ ಹಿಂದೂಗಳೊಂದಿಗೆ ನಡೆದುಕೊಂಡ ರೀತಿ ತಪ್ಪು ಎಂದು ಘಂಟಾಘೊಷವಾಗಿ ಸಾರಿದ್ದನ್ನು ನೋಡಿದ್ದೀರಾ? ಹೋಗಲಿ, ನಿಮ್ಮ ಮಿತ್ರ ಮುಸಲ್ಮಾನರು ರಾಮನ ಮಂದಿರವನ್ನು ಬಾಬರ್ ಕೆಡವಿಸಿದ್ದು ತಪ್ಪು ಎಂದದ್ದನ್ನು ಕೇಳಿದ್ದು ನೆನಪಿದೆಯಾ? ಪಶ್ಚಾತ್ತಾಪವೆನ್ನುವುದು ಸುಲಭಕ್ಕೆ ಬರುವಂಥದ್ದಲ್ಲ. ಅದಕ್ಕೆ ವಿಶಾಲ ಹೃದಯ ಬೇಕು, ಸಂಸ್ಕಾರವಿರಬೇಕು!

    ಇದನ್ನು ಹೇಳುವಾಗಲೇ ಇತ್ತೀಚೆಗೆ ಸಿಎಎ ವಿರೋಧಿ ಕಾರ್ಯಕ್ರಮವೊಂದರಲ್ಲಿ ಬುರ್ಖಾಧಾರಿ ಹೆಣ್ಣುಮಗಳೊಬ್ಬಳು ಮಾತನಾಡುತ್ತ ಹಿಂದೂಗಳನ್ನು ಮನಸಾರೆ ಹೊಗಳುತ್ತಿದ್ದಳು. ಮಸೀದಿಯಿಂದ ಅಜಾನ್ ಕೂಗುವಾಗ ಭಜನೆಯನ್ನು ನಿಲ್ಲಿಸಿಬಿಡುವ ಅಯ್ಯಪ್ಪ ಭಕ್ತರ ಕುರಿತಂತೆ ಆಕೆ ಮನಸಾರೆ ಪ್ರಶಂಸಿಸುತ್ತಿದ್ದಳು. ಒಮ್ಮೆ ನಗು ಬಂತು. ಕಳೆದ ನೂರಾರು ವರ್ಷಗಳಿಂದ ಅಜಾನ್​ಗೆ ಗೌರವ ಸಲ್ಲಿಸಿ ನಾವು ಭಜನೆಯನ್ನು ನಿಲ್ಲಿಸುತ್ತಿದ್ದೇವೆ; ಇವರೆಲ್ಲರ ದೃಷ್ಟಿಯ ಕಟ್ಟರ್ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣವನ್ನೂ ನಿಲ್ಲಿಸಿದ್ದಾರೆ.

    ಆದರೆ ದೇವಸ್ಥಾನದ ರಥೋತ್ಸವ ನಡೆಯುತ್ತಿದೆ. ಹೀಗಾಗಿ ಈ ಒಂದು ದಿನ ಅಜಾನ್ ನಿಲ್ಲಿಸಿಬಿಡೋಣವೆಂದು ಈ ಬಾಂಧವರು ಎಂದಾದರೂ ಹೇಳಿದ್ದನ್ನು ಕೇಳಿದ್ದೀರೇನು? ಹಾಗಂತ ಅಜಾನ್ ಇಸ್ಲಾಮಿನ ಅನಿವಾರ್ಯ ಅಂಗವೇನಲ್ಲ. ಆಸ್ಟ್ರೇಲಿಯಾವೂ ಸೇರಿ ಅನೇಕ ರಾಷ್ಟ್ರಗಳಲ್ಲಿ ಅಜಾನ್ ಕೂಗುವಂತೆಯೇ ಇಲ್ಲ. ಪಾಕಿಸ್ತಾನದ ಪ್ರಿಯರಾಷ್ಟ್ರ ಚೀನಾದಲ್ಲಂತೂ ಅಜಾನ್ ಕೂಗುವುದಿರಲಿ ಕುರಾನ್ ಅನ್ನೇ ಬದಲಿಸಿ ಮುದ್ರಿಸುವಂತೆ ಮಾಡಿಬಿಟ್ಟಿದ್ದಾರೆ! ಇಲ್ಲಿ ಮಾತ್ರ ಈ ಕಟ್ಟರತೆ ಏಕೆ? ಉತ್ತರ ಕಠಿಣವೇನೂ ಅಲ್ಲ. ಹಿಂದೂಗಳು ಸಂಸ್ಕಾರವಂತರು.

    ಎಲ್ಲರೊಂದಿಗೆ ಪ್ರೀತಿಯಿಂದ ಬದುಕಬಲ್ಲವರು. ಆದ್ದರಿಂದ ಅವರನ್ನು ಎಷ್ಟು ತುಳಿದರೂ ನಡೆಯುತ್ತದೆಂಬ ಒಂದೇ ಒಂದು ಕಾರಣವಷ್ಟೇ. ಸಿಎಎ ವಿರುದ್ಧದ ಪ್ರತಿಭಟನೆಯ ನೆಪದಲ್ಲಿ ಅನೇಕ ಸಂಗತಿಗಳನ್ನು ತಮಗರಿವಿಲ್ಲದಂತೆ ಮುಸಲ್ಮಾನರು ಬಿಟ್ಟುಕೊಟ್ಟುಬಿಟ್ಟಿದ್ದಾರೆ. ಹಿಂದೂ ಗಳೊಡನೆಯೂ ಶಾಂತಿ-ಸೌಹಾರ್ದದಿಂದ ಬದುಕಲು ಸಾಧ್ಯವಿಲ್ಲವೆಂದ ಮೇಲೆ ಜಗತ್ತಿನ ಮತ್ತಾ್ಯವ ಜನಾಂಗದೊಂದಿಗೂ ಅವರು ಬದುಕಬಲ್ಲರು?

    ಮತ್ತೆ ಕಾಶ್ಮೀರದ ವಿಚಾರಕ್ಕೆ ಬರುತ್ತೇನೆ. 90ರ ದಶಕದಲ್ಲಿ ಕಾಶ್ಮೀರದಲ್ಲಿ ಮೊಳಗಿದ ಸ್ವಾತಂತ್ರ್ಯದ ಘೊಷಣೆಗಳು ಇಂದಿಗೂ ಪಂಡಿತರ ಕಿವಿಯಲ್ಲಿ ನೆನ್ನೆಯೇ ಕೂಗಿದಂತೆ ಕೇಳುತ್ತಿವೆ. 1990ರ ಜನವರಿ 19ರ ರಾತ್ರಿ ಅಜಾನ್ ಕೂಗಬೇಕಾಗಿದ್ದ ಮಸೀದಿಯಿಂದ ಪಂಡಿತರ ವಿರುದ್ಧ ಮೊಳಗಿದ ಘೊಷಣೆಗಳು ಎಂಥವರಲ್ಲೂ ನಡುಕ ಹುಟ್ಟಿಸುವಂಥದ್ದೇ ಆಗಿತ್ತು. ‘ಯಹಾ ಕ್ಯಾ ಚಲೇಗಾ ನಿಜಾಂ-ಎ-ಮುಸ್ತಫಾ ಲಾರ್ಶಯಾ ಲಾಗರ್ಬಿಯಾ, ಇಸ್ಲಾಮಿಯಾ ಇಸ್ಲಾಮಿಯಾ’ (ಇಲ್ಲಿ ಯಾವುದು ನಡೆಯುತ್ತದೆ? ಮುಸ್ತಫನ ಆಳ್ವಿಕೆ, ಪೂರ್ವದ್ದೂ ಅಲ್ಲ, ಪಶ್ಚಿಮದ್ದೂ ಅಲ್ಲ, ಇಸ್ಲಾಮಿನ ಆಳ್ವಿಕೆ) ಬರಿ ಇಷ್ಟೇ ಆಗಿದ್ದರೆ ಸಮಾಧಾನವಾಗಿರಬಹುದಿತ್ತೇನೋ. ಆದರೆ ಮತಾಂಧರಿಗೆ ಇಷ್ಟು ಸಾಲದಲ್ಲ. ಅವರು ಮತ್ತೊಂದು ಘೊಷಣೆ ಮೊಳಗಿಸಿದರು. ‘ಅಸ್ಸೀ ಗಚ್ಚೀ ಪನೂನುಯ್ ಪಾಕಿಸ್ತಾನ್, ಬಾಟವ್​ರೋಸ್ತುಯ್ ಬಟ್ನೇಸಾನ್’ (ಕಾಶ್ಮೀರವನ್ನು ಪಾಕಿಸ್ತಾನ ಮಾಡುತ್ತೇವೆ. ಅದು ಪಂಡಿತರನ್ನು ಓಡಿಸಿ ಅವರ ಪತ್ನಿಯರನ್ನು ಉಳಿಸಿಕೊಂಡು) ಎಂಬ ಘೊಷಣೆ ಮೊಳಗುವಾಗ ಎಂಥವರ ಹೃದಯವೂ ಬಿರಿದು ಹೋಗುವಷ್ಟು ಬಡಿದುಕೊಳ್ಳುತ್ತಿತ್ತು.

    ಅಂದು ರಾತ್ರಿ ಯಾವೊಬ್ಬ ಮುಸ್ಲಿಂ ಗಂಡಸು, ಮಗುವೂ ಮನೆಯೊಳಗಿರಲಿಲ್ಲ. ಎಲ್ಲರೂ ‘ಭಾರತ ನಾಶವಾಗಲಿ, ಪಾಕಿಸ್ತಾನಕ್ಕೆ ಜಯವಾಗಲಿ’ ಎಂಬ ಘೊಷಣೆ ಕೂಗುತ್ತ ಬೀದಿಗಿಳಿದುಬಿಟ್ಟಿದ್ದರು. ಅಲ್ಲಿಯವರೆಗೂ ಸಹಿಷ್ಣುಗಳು, ಜಾತ್ಯತೀತರು, ಸುಸಂಸ್ಕೃತರು, ಶಿಕ್ಷಿತರು ಎಂಬ ಬಾಹ್ಯಚಹರೆ ಹೊಂದಿದ್ದ ಇವರು ಅಸಲಿ ಮುಖ ತೋರಿಸಲಾರಂಭಿಸಿದರು. ಒಟ್ಟಾರೆಯಾಗಿ ತಮ್ಮೊಂದಿಗೆ ಇಷ್ಟೂ ದಿನ ಇದ್ದ ಹಿಂದೂಗಳು ಈಗ ಕಾಫಿರ್​ರಾಗಿ ಕಂಡುಬಂದರು. ಅವರನ್ನು ಕೊಲ್ಲುವುದಷ್ಟೇ ಈಗ ಗುರಿಯಾಗಿತ್ತು.

    ಅವರ ಮುಂದಿದ್ದ ನೀತಿಯೊಂದೇ. ಒಬ್ಬರನ್ನು ಕೊಂದು ಸಾವಿರ ಜನರನ್ನು ಹೆದರಿಸಿ ಅಂತ. ಈ ಹೃದಯವಿದ್ರಾವಕ ಕಥನದ ನಡುವೆ ಸ್ವಲ್ಪ ಮೂಗು ತೂರಿಸುವುದಾದರೆ ಸಿಎಎ ಪ್ರತಿಭಟನೆಯಲ್ಲೂ ಅವರು ಬಳಸಬೇಕೆಂದಿದ್ದ ನೀತಿ ಅದೇ. ಕಂಡ-ಕಂಡಲ್ಲಿ ಬೆಂಕಿ ಹಚ್ಚಿ ಒಂದಷ್ಟು ಜನರನ್ನು ಕೊಂದುಬಿಟ್ಟರೆ ಇಡಿಯ ಹಿಂದೂಸಮಾಜ ಬೆದರಿಬಿಡುತ್ತದೆ. ಇನ್ನು ಮುಂದೆ ತಮ್ಮ ವಿರುದ್ಧ ಮಾತನಾಡುವ ಧೈರ್ಯ ತೋರಲಾರದು ಎಂಬುದಷ್ಟೇ. ಮಧ್ಯೆ ಅವರ ಯೋಜನೆಗೆ ಅಡ್ಡಲಾಗಿ ನಿಂತಿದ್ದು ಯೋಗಿ ಆದಿತ್ಯನಾಥ್ ಮಾತ್ರ. ಅವರು ಕೊಂದು ಹೆದರಿಸುವ ಮುನ್ನವೇ ಅವರಲ್ಲಿರುವ ಉಗ್ರವಾದಿಗಳನ್ನು ಕೊಂದು ಅವರ ನಾಯಕರುಗಳೇ ಭಯಭೀತರಾಗುವಂತೆ ಮಾಡಿಬಿಟ್ಟರು.

    ಮತಾಂಧರದ್ದೊಂದು ನೀತಿ ಇದೆ. ಎದುರಾಳಿಗಳು ಹೆದರಿದರೆ ಅವರ ಕುತ್ತಿಗೆ ಮೇಲೆ ಕೂತುಬಿಡುತ್ತಾರೆ. ತಿರುಗಿಸಿ ಒದ್ದರೆ ಕಾಲಿಗೆ ಬಿದ್ದುಬಿಡುತ್ತಾರೆ. ಇದು ಇತಿಹಾಸದುದ್ದಕ್ಕೂ ಕಂಡು ಬಂದಿರುವ ಏಕೈಕ ಸತ್ಯ. ಉತ್ತರಪ್ರದೇಶದಲ್ಲಿ ಯೋಗಿಯ ಸರ್ಕಾರ ಏಕೆ ಅನಿವಾರ್ಯವಾಗಿತ್ತೆಂದು ಈಗ ಅರಿವಾಗಿರಬಹುದು. ಒಂದು ಹೆಜ್ಜೆ ಮುಂದಿಟ್ಟು ದೆಹಲಿಯಲ್ಲೂ ಅಮಿತ್ ಷಾ ಮಾತು ಕೇಳುವ ಸರ್ಕಾರವಿದ್ದಿದ್ದರೆ ದಂಗೆಗಳು ಎಂದೋ ನಿಂತಿರಬಹುದಿತ್ತು ಎಂಬುದನ್ನು ಊಹಿಸಿ ನೋಡಿ!

    ಕಾಶ್ಮೀರದಲ್ಲಿ 90ರ ದಶಕದ ಮೊದಲ ರಕ್ತ ಹೀರಿದ್ದು ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್​ನವರೇ. ಮುಸಲ್ಮಾನರ ನಡುವೆ ಸಾಕಷ್ಟು ಖ್ಯಾತವಾಗಿದ್ದ ಮತ್ತು ಅವರ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದ ವಕೀಲರೂ ಆಗಿದ್ದ ಟೀಕಾಲಾಲ್ ಟಪ್ಲು ಆ ಮೊದಲ ಬಲಿಯಾಗಿಬಿಟ್ಟರು. ಅವರದ್ದು ಒಂದೇ ತಪ್ಪು, ಅವರು ಹಿಂದೂವಾಗಿದ್ದರು ಎನ್ನುವುದು ಅಷ್ಟೇ! ಅದಕ್ಕೆ ಸೇರಿಸಬಹುದಾಗಿದ್ದ ಮತ್ತೊಂದು ತಪ್ಪೇನಾದರೂ ಇದ್ದರೆ ಅದು ಟೀಕಾಲಾಲರ ಬಿಜೆಪಿಯೊಂದಿಗಿನ ಸಖ್ಯ ಮಾತ್ರ. ಅವರ ಅಂತ್ಯಸಂಸ್ಕಾರದ ಮೆರವಣಿಗೆಗೆ ಅನೇಕ ಮುಸಲ್ಮಾನರೂ ಸೇರಿದ್ದರು. ಇದು ಉಗ್ರ ಸಂಘಟನೆಗೆ ಎರಡು ದಿಕ್ಕಿನಲ್ಲಿ ಲಾಭಮಾಡಿಕೊಟ್ಟಿತು.

    ಮೊದಲನೆಯದು ಪಂಡಿತರು ಮುಸಲ್ಮಾನರೊಂದಿಗೆ ಸೂಕ್ತ ವ್ಯವಹಾರವನ್ನಿರಿಸಿಕೊಂಡಿದ್ದರೂ ಅವರನ್ನು ಕೊಲ್ಲಲಾಗುವುದು ಎಂಬುದಾದರೆ, ಮತ್ತೊಂದು ಕಾಶ್ಮೀರ ಮುಸಲ್ಮಾನರಿಗಷ್ಟೇ ಎಂಬ ಸಂದೇಶವನ್ನು ಪಂಡಿತರಿಗೆ ಕೊಡುವುದು. ಟಪ್ಲು ಅವರ ಸಾವು ಪಂಡಿತರ ನಡುವೆ ಸಂಚಲನ ಉಂಟುಮಾಡಿಬಿಟ್ಟಿತು. ಅದರ ಹಿಂದು-ಹಿಂದೆಯೇ ನಿವೃತ್ತ ನ್ಯಾಯಾಧೀಶ ಹರಿಸಿಂಗರನ್ನು ಶ್ರೀನಗರದ ರಸ್ತೆಯಲ್ಲಿ ಕತ್ತರಿಸಿ ರಕ್ತದ ಮಡುವಿನ ನಡುವೆ ಅವರು ಬೀಳುವಂತೆ ಮಾಡಲಾಯ್ತು. ಈ ಸಾವನ್ನು ಸುತ್ತಮುತ್ತಲಿನ ಅಂಗಡಿಗಳವರು ಗೆಲುವಿನ ನಗೆಯೊಂದಿಗೆ ಸ್ವೀಕರಿಸಿದ್ದು ವಿಪರ್ಯಾಸವಾಗಿತ್ತು. ಅಲ್ಲಿಗೆ ಕಾಶ್ಮೀರದ ಬರಲಿರುವ ದಿನಗಳ ಕ್ರೂರತೆಯ ಅರಿವು ಸ್ವಲ್ಪಮಟ್ಟಿಗೆ ಸಿಕ್ಕಂತಾಗಿತ್ತು!

    ಅನೇಕ ಪ್ರತ್ಯಕ್ಷದರ್ಶಿಗಳು ಅಂದಿನ ದಿನದ ಘಟನೆಯನ್ನು ಆನಂತರ ದಾಖಲು ಮಾಡಿದ ಬಗೆ ನಿಮ್ಮ ಬೆನ್ನುಹುರಿಯನ್ನೂ ಬೆಚ್ಚಗಾಗಿಸಿಬಿಡುತ್ತದೆ. ಮುಸಲ್ಮಾನರು ಸಿಕ್ಕ-ಸಿಕ್ಕಲ್ಲಿ ಈ ಘಟನೆಯ ಕುರಿತಂತೆ ಹೇಳುತ್ತ, ಒಬ್ಬರನ್ನೊಬ್ಬರು ಅಭಿನಂದಿಸಿಕೊಳ್ಳುತ್ತಿದ್ದರಂತೆ! ಅಂದರೆ ಕೊಲೆಗಡುಕತನದ ಆ ಮಾನಸಿಕತೆ ಆಧುನಿಕ ಯುಗದಲ್ಲೂ ಅವರಿಂದ ದೂರವಾಗಿರಲಿಲ್ಲ. ಅನಂತ್​ನಾಗ್​ನಲ್ಲಿ ವಕೀಲರಾಗಿದ್ದೂ ಮುಸಲ್ಮಾನರ ನಡುವೆ ಅತ್ಯಂತ ಗೌರವವನ್ನು ಪಡೆದಿದ್ದ ಪಿ.ಎನ್ ಭಟ್ಟರ ದೇಹದ ತುಂಬ ಹೊಕ್ಕ ಗುಂಡುಗಳು ಭಯೋತ್ಪಾದಕರದ್ದೆಂದು ಗೊತ್ತಾದಾಗ ಇಡೀ ದೇಶ ತಲ್ಲಣಗೊಂಡಿತ್ತು.

    ಅದರ ಹಿಂದು-ಹಿಂದೆಯೇ ಶ್ರೀನಗರ ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದ ಲಸ್ಸಾ ಕೌಲ್​ರವರನ್ನು ನಡುರಸ್ತೆಯಲ್ಲಿ ಕೊಲ್ಲಲಾಯ್ತು. ರಾಜ್ಯಪಾಲರ ಕಾರ್ಯದರ್ಶಿಯಾಗಿದ್ದ ಆರ್.ಎನ್ ಹಂಡು ಕೂಡ ಸರ್ಕಾರಿ ವಾಹನದಲ್ಲಿದ್ದಾಗಲೇ ಕೊಲ್ಲಲ್ಪಟ್ಟಿದ್ದು. ಇದು ಕೊಲೆಗಡುಕರ ತಯಾರಿಯನ್ನು ಮತ್ತು ಸರ್ಕಾರದ ವೈಫಲ್ಯವನ್ನು ಎತ್ತಿಹಿಡಿಯುವಂತಿತ್ತು. ಅದರ ಹಿಂದು-ಹಿಂದೆಯೇ ದೂರವಾಣಿ ಕಚೇರಿಯಲ್ಲಿ ಇಂಜಿನಿಯರ್ ಆಗಿದ್ದ ಡಿ.ಕೆ ಗಂಜುರವರನ್ನು ಕೊಲ್ಲಬೇಕೆಂದು ಅವರ ಮನೆಗೆ ನುಗ್ಗಿದರು. ಪರಿಸ್ಥಿತಿಯನ್ನು ಅರಿತ ಗಂಜು ಮನೆಯಲ್ಲಿದ್ದ ಇದ್ದಿಲಿನ ಡಬ್ಬವೊಂದನ್ನು ಹೊಕ್ಕಿ ಕುಳಿತುಬಿಟ್ಟರು. ಆತನನ್ನು ಕಾಣದೆ ಬಂದೂಕುಧಾರಿಗಳು ಮರಳುತ್ತಿರುವಾಗ ಅಕ್ಕ-ಪಕ್ಕದ ಮನೆಯವರು ಕಣ್ಸನ್ನೆ ಮಾಡಿ ಆತನಿದ್ದ ಜಾಗವನ್ನು ತೋರಿದರು. ಮುಂದೇನಾಯಿತು ಎಂದು ಹೇಳಬೇಕಿಲ್ಲ ಅಲ್ಲವೇ? ಹತ್ತಾರು

    ಗುಂಡುಗಳು ಆ ಡಬ್ಬಿಯನ್ನು ಹೊಕ್ಕವು. ರಕ್ತದ ಮಡುವಿನಲ್ಲಿ ಗಂಜು ಕೊನೆಯುಸಿರೆಳೆದರು. ಆತನ ಪತ್ನಿ ತನ್ನನ್ನೂ ಕೊಂದುಬಿಡಿ ಏಕೆ ಉಳಿಸುತ್ತಿದ್ದೀರಿ ಎಂದು ಗೋಗರೆದಿದ್ದಕ್ಕೆ. ‘ಈತನ ಸಾವಿಗೆ ಕಣ್ಣೀರಿಡುವವರು ಬೇಕಲ್ಲ’ ಎಂದು ಗೆಲುವಿನ ನಗೆ ಬೀರುತ್ತ ಹೊರಟುಬಿಟ್ಟರು!

    ಹೇಳಲಿಕ್ಕೆ ಇನ್ನೂ ಇದೆ. ಲೇಖನದ ವ್ಯಾಪ್ತಿ ಮುಗಿದಿದೆ ಅಷ್ಟೇ! ಶಿಕಾರ್​ದಲ್ಲಿ ಇವ್ಯಾವುದನ್ನೂ ತೋರಿಸುವ ಪ್ರಯತ್ನ ಮಾಡಿಲ್ಲ. ಬದಲಿಗೆ ‘ಆದದ್ದನ್ನು ಮರೆತುಬಿಡಿ’ ಎಂದು ತೇಪೆ ಹಚ್ಚುವ ಕೆಲಸ ನಡೆದಿದೆ. ಸ್ವಲ್ಪ ಯಾಮಾರಿದರೆ ಸಿಎಎ ಪ್ರತಿಭಟನೆಯೂ 1990ರ ಕಾಶ್ಮೀರದ ಸ್ಥಿತಿಗತಿಯನ್ನು ನೆನಪಿಸಿಬಿಡುವಂತಾಗುತ್ತಿತ್ತು. ದೇಶ ಮೊದಲಿಗಿಂತಲೂ ಬಲಾಢ್ಯವಾಗಿದ್ದಕ್ಕೆ ನಾವೆಲ್ಲ ಉಳಿದೆವು ಅಷ್ಟೇ! ಇಲ್ಲವಾದರೆ ಬಸ್ಸಿಗೆ ಬೆಂಕಿ ಹಚ್ಚಿದವರು, ಆನಂತರ ಮನೆಗಳಿಗೇ ಕೊಳ್ಳಿ ಇಡುತ್ತಿದ್ದುದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts